ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನಿರ್ವಹಣಾ ಮಂಡಳಿ ರಚನೆಯೊಂದೇ ಪರಿಹಾರ: ರಜನಿ

Last Updated 29 ಮಾರ್ಚ್ 2018, 19:38 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚನೆ ಒಂದೇ ಒಪ್ಪಿಕೊಳ್ಳಬಹುದಾದ ಪರಿಹಾರ ಎಂದು ಹಿರಿಯ ನಟ ರಜನಿಕಾಂತ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಜನಿಕಾಂತ್, ನ್ಯಾಯವು ನಮ್ಮ ಪರವಾಗಿ ಇರಲಿದೆ ಎಂಬುದನ್ನು ಪ್ರಾಮಾಣಿಕವಾಗಿ ನಂಬುತ್ತೇನೆ’ ಎಂದಿದ್ದಾರೆ.

ನದಿ ವಿವಾದ ಕುರಿತು ಫೆ.16ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಆರು ವಾರಗಳಲ್ಲಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿತ್ತು. ನೀರು ಹಂಚಿಕೆ ಸಂಬಂಧ ಮಂಡಳಿ ಜತೆಗೆ, ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ ಮಾಡುವಂತೆ ತಮಿಳುನಾಡು, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೋರ್ಟ್‌ ನೀಡಿದ್ದ ಗಡುವು ಮಾರ್ಚ್‌ 29ಕ್ಕೆ ಮುಗಿದಿದ್ದು, ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ತಮಿಳುನಾಡು ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಈ ಮಧ್ಯೆ ಕೇಂದ್ರವು ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವರೊಂದಿಗೆ ಸಿ.ಎಂ ಮಾತುಕತೆ: ಮಂಡಳಿ ರಚನೆ ಸಂಬಂಧ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಹಿರಿಯ ಸಚಿವರೊಂದಿಗೆ ಗುರುವಾರ ಮಾತುಕತೆ ನಡೆಸಿದರು.

ಚರ್ಚೆ ವೇಳೆ ಉಪಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಇದ್ದರು. ಆರು ವಾರಗಳಲ್ಲಿ ಮಂಡಳಿ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ನೀಡಿದ್ದ ಗಡುವು ಶುಕ್ರವಾರಕ್ಕೆ ಮುಗಿದಿದೆ. ಈ ವಿಷಯದ ಕುರಿತು ಹಿರಿಯ ಸಚಿವರೊಂದಿಗೆ ಪಳನಿಸ್ವಾಮಿ ಚರ್ಚೆ ನಡೆಸಿದರು.

ದನಿಗೂಡಿಸಿದ ಕಮಲಹಾಸನ್‌
ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಹಿರಿಯ ನಟ, ‘ಮಕ್ಕಳ ನಿಧಿ ಮಯ್ಯಂ‘ ಪಕ್ಷದ ಸ್ಥಾಪಕ ಕಮಲಹಾಸನ್‌ ಅವರೂ ಒತ್ತಾಯಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಮಂಡಳಿ ಸ್ಥಾಪನೆ ಮಾಡುವಂತೆ ಮನವಿ ಮಾಡಿದರು.

ಪ್ರಧಾನಿ ಅವರು ಮನಸ್ಸು ಮಾಡಿದರೆ ಮಂಡಳಿ ರಚನೆ ಮಾಡಬಹುದು. ಇದು ಸರಳ ಹಾಗೂ ನಮಗೆ ಅವಶ್ಯಕವಾದದ್ದು. ತಮಿಳುನಾಡಿನ ಜನರಿಗೆ ನೀರು ಬೇಕಾಗಿದೆ ಎಂದರು.

‘ಬೆದರಿಕೆ ತಂತ್ರ ಬೇಡ: ತಜ್ಞರ ಸಮಿತಿ ರಚಿಸಿ’
ಹಾಸನ:
ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಹೋರಾಟಕ್ಕೆ ಮುಂದಾಗಿರುವ ತಮಿಳುನಾಡು ಕ್ರಮಕ್ಕೆ ಸಂಸದ ಎಚ್‌.ಡಿ.ದೇವೇಗೌಡ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಈ ರೀತಿಯ ಹಠಮಾರಿತನದ ನಡೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸೌಹಾರ್ದಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸುಪ್ರೀಂ ಕೋರ್ಟ್ ಆದೇಶದನ್ವಯ ನಿರ್ವಹಣಾ ಮಂಡಳಿ ರಚನೆ ಕಷ್ಟ ಸಾಧ್ಯ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಆದರೂ ತಮಿಳುನಾಡು ಸಂಸದರು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಸಂಸದರೊಬ್ಬರು ಆತ್ಮಹತ್ಯೆಗೂ ಸಿದ್ಧ ಎಂದಿದ್ದಾರೆ. ಆದರೆ ಈ ಧೋರಣೆ ಸರಿಯಲ್ಲ’ ಎಂದು ಹೇಳಿದರು.

'ಮತ್ತೊಮ್ಮೆ ಸುಪ್ರೀಂ ಪೀಠದ ಎದುರು ಮನವರಿಕೆ ಮಾಡಿಕೊಡುವುದಾಗಿ ಕೇಂದ್ರ ಹೇಳಿದೆ. ಆಗ ಕೋರ್ಟ್‌ ಮತ್ತೇನು ಹೇಳುತ್ತೋ ಗೊತ್ತಿಲ್ಲ. ಸದ್ಯಕ್ಕೆ ನೀರಾವರಿ ತಜ್ಞರನ್ನು ಒಳಗೊಂಡ ತಾತ್ಕಾಲಿಕ ಸಮಿತಿ ರಚನೆ ಮಾಡಬೇಕು. ಅದಕ್ಕೆ ಕೇಂದ್ರ ಜಲ ಸಂಪನ್ಮೂಲ ಸಚಿವರೇ ಅಧ್ಯಕ್ಷರಾಗಿ, ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸಮಿತಿಯಲ್ಲಿರಬೇಕು. ನಾಲ್ಕು ರಾಜ್ಯಗಳ ವ್ಯಾಪ್ತಿಯ ಜಲಾಶಯಗಳ ನೀರಿನ ಲಭ್ಯತೆ, ಬೆಳೆಗಳ ಸ್ಥಿತಿಗತಿ ಬಗ್ಗೆ ನಾಲ್ಕೈದು ವರ್ಷ ಅಧ್ಯಯನ ನಡೆಸಿ ನಂತರ ಒಂದು ತೀರ್ಮಾನಕ್ಕೆ ಬರುವುದು ಒಳಿತು’ ಎಂದು ಸಲಹೆ ನೀಡಿದರು.

ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗುವ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಿ, ‘ರಾಜ್ಯದ ಚುನಾವಣೆ ಮುಗಿಯುವವರೆಗೆ ಯಾವುದೇ ಒಕ್ಕೂಟಕ್ಕೆ ಸೇರುವುದಿಲ್ಲ. ಹಾಗಂತ ನನ್ನದು ಅಸಹಕಾರ ಭಾವನೆಯಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕಾಗಿರುವ ಪೆಟ್ಟನ್ನು ಸರಿಪಡಿಸುವುದು ಮೊದಲ ಗುರಿ. ಅಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT