ನವದೆಹಲಿ: ಅಣೆಕಟ್ಟೆಗಳ ಸುರಕ್ಷತೆಯ ಕುರಿತು ಕೇಂದ್ರ ಸರ್ಕಾರವು ಮಂಡಿಸಿದ ಮಸೂದೆಗೆ ವಿರೋಧಪಕ್ಷಗಳು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ‘ಕೇಂದ್ರ ಸರ್ಕಾರವು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ’ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದರು.
ಅಣೆಕಟ್ಟೆ ಸುರಕ್ಷತಾ ಮಸೂದೆ–2019 ಅನ್ನು ಲೋಕಸಭೆಯಲ್ಲಿ ಮಂಡಿಸಿದ ಜಲಶಕ್ತಿ ಖಾತೆಯ ಸಚಿವ ಗಜೇಂದ್ರಸಿಂಗ್ ಶೇಖಾವತ್, ‘ಅಣೆಕಟ್ಟೆಗಳ ಮೇಲೆ ರಾಜ್ಯ ಸರ್ಕಾರಗಳು ಹೊಂದಿರುವ ನಿಯಂತ್ರಣವನ್ನು ಮೊಟಕುಗೊಳಿಸುವ ಉದ್ದೇಶ ಕೇಂದ್ರಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸದಸ್ಯರಾದ ಅಧಿರ್ ರಂಜನ್ ಚೌಧರಿ, ತರುಣ್ ಗೊಗೊಯಿ, ಶಶಿ ತರೂರ್ ಹಾಗೂ ಮನೀಶ್ ತಿವಾರಿ, ಬಿಜೆಡಿ ಮುಖಂಡ ಬಿ. ಮೆಹತಾಬ್, ಟಿಎಂಸಿಯ ಸುಗತಾ ರಾಯ್, ಡಿಎಂಕೆಯ ಎ. ರಾಜಾ ಮುಂತಾದವರು ಮಸೂದೆಯನ್ನು ವಿರೋಧಿಸಿದರು.
‘ಮಸೂದೆಯನ್ನು ಸಂಸದೀಯ ಸಮಿತಿಯ ಪರಿಗಣನೆಗೆ ಕಳುಹಿಸಬೇಕು’ ಎಂದು ಎ. ರಾಜಾ ಒತ್ತಾಯಿಸಿದರು.