ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲಡಾಕ್ ಪ್ರಾಂತದ ಲೇಹ್ ಮಧ್ಯೆ ಸಂಪರ್ಕ ಕಲ್ಪಿಸುವ ಜೊಜಿಲಾ ಪಾಸ್ನಲ್ಲಿ ಸರ್ವಋತು ಸುರಂಗ ರಸ್ತೆಯ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟು ₹ 25,000 ಕೋಟಿ ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಮೋದಿ ಘೋಷಿಸಿದ್ದಾರೆ. ಆ ಯೋಜನೆಗಳಲ್ಲಿ ಜೊಜಿಲಾ ಪಾಸ್ ಸುರಂಗ ಮಾರ್ಗವೂ ಒಂದು.
ಸುರಂಗ ನಿರ್ಮಾಣದ ನಂತರ
* ಈ ಮೂರೂ ಸ್ಥಳಗಳ ಮಧ್ಯೆ ವರ್ಷದ ಯಾವುದೇ ದಿನದಲ್ಲೂ ರಸ್ತೆ ಸಂಪರ್ಕ ಸಾಧ್ಯವಾಗುತ್ತದೆ.
* ಕಾರ್ಗಿಲ್ಗೆ ತುರ್ತು ಸಂದರ್ಭದಲ್ಲಿ ಸೈನಿಕರನ್ನು, ಸೇನಾ ವಾಹನಗಳನ್ನು ಮತ್ತು ಯುದ್ಧ ಸಾಮಗ್ರಿಗಳನ್ನು ತ್ವರಿತವಾಗಿ ರಸ್ತೆ ಮೂಲಕವೇ ಸಾಗಿಸಲು ಸಾಧ್ಯವಾಗುತ್ತದೆ.
* ವರ್ಷದ ಎಲ್ಲಾ ಋತುಗಳಲ್ಲೂ ಪ್ರವಾಸೋದ್ಯಮ ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
ಸದ್ಯ ಹಿಮಪಾತದ ಸ್ಥಿತಿ
*ಶ್ರೀನಗರ–ಕಾರ್ಗಿಲ್–ಲೇಹ್ ಮಧ್ಯೆ ಸಂಪರ್ಕ ಕಲ್ಪಿಸುವ ಜೊಜಿಲಾ ಪಾಸ್ ಚಳಿಗಾಲದಲ್ಲಿ ಹಿಮಪಾತದಿಂದ ಮುಚ್ಚಿ ಹೋಗುತ್ತದೆ. ರಸ್ತೆ ಸಂಪರ್ಕ ಸ್ಥಗಿತಗೊಳ್ಳುತ್ತದೆ.
*ದೇಶದ ಭದ್ರತೆ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಸ್ಥಳವಾದ ಕಾರ್ಗಿಲ್ಗೆ ಸೈನಿಕರ, ಸೇನಾ ವಾಹನಗಳ, ಸೇನಾ ಸಲಕರಣೆಗಳ ಪೂರೈಕೆ ಸ್ಥಗಿತಗೊಳ್ಳುತ್ತದೆ.
*ಲಡಾಕ್ ಪ್ರಾಂತದಲ್ಲಿ ಪ್ರಮುಖ ಆದಾಯದ ಮೂಲವಾದ ಪ್ರವಾಸೋದ್ಯಮ ಸ್ಥಗಿತಗೊಳ್ಳುತ್ತದೆ.