ಜಮ್ಮು: ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮಗಳಲ್ಲಿ ಪಾಕಿಸ್ತಾನ ಸೇನೆಯು ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾನುವಾರ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ.
ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭೇಟಿ ನೀಡಿದ ಒಂದು ದಿನದ ಬಳಿಕ ರಜೋರಿ, ಪೂಂಚ್ ಜಿಲ್ಲೆ ಗಡಿಯಲ್ಲಿ ದಾಳಿ ನಡೆದಿದೆ. ಪರಿಸ್ಥಿತಿಯನ್ನು ರಾತ್ರಿ ಗಸ್ತು ಪಡೆ ಪರಿಶೀಲನೆ ನಡೆಸುತ್ತಿದೆ.
ಪೂಂಚ್ ವಲಯದಲ್ಲಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಶೆಲ್ ದಾಳಿ ನಡೆಸಲಾಗಿದ್ದು, ಭಾರತ ಸೇನೆ ಸಹ ಪ್ರತಿದಾಳಿ ನಡೆಸಿದೆ ಎಂದು ಸೇನಾಪಡೆಯ ಜಮ್ಮು ವಲಯದ ವಕ್ತಾರ ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ ಎರಡು ಜಿಲ್ಲೆಗಳಲ್ಲಿ ಪಾಕಿಸ್ತಾನ ಸೇನೆ ನಡೆಸಿದ ದಾಳಿಯಲ್ಲಿ 10 ತಿಂಗಳ ಮಗು, ಐವರು ಯೋಧರು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.