ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮದ ಕತ್ತು ಹಿಸುಕುತ್ತಿರುವ ಕೋಮು ಸಂಘರ್ಷ

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‌ಮಂಗಳೂರು: ಉದ್ದಕ್ಕೂ ರುದ್ರರಮಣೀಯ ಕಡಲತೀರ, ಜಾತಿ ಭೇದವಿಲ್ಲದೆ ಜನರು ನಂಬುವ ಹರಕೆಯ ದೈವಗಳು, ದೇವಸ್ಥಾನಗಳು, ಮತ್ತೊಂದು ಮಗ್ಗುಲಲ್ಲಿ ಸಹ್ಯಾದ್ರಿ ಶೃಂಗಶ್ರೇಣಿಗಳನ್ನು ಒಳಗೊಂಡ ಈ ಪ್ರದೇಶ ‘ಕರಾವಳಿ ಪ್ರವಾಸೋದ್ಯಮ’ದ ಅಭಿವೃದ್ಧಿಗೆ ಹೇಳಿ ಮಾಡಿಸಿದ ತಾಣ.

ಪ್ರಖ್ಯಾತ ಆಸ್ಪತ್ರೆಗಳು, ಹತ್ತು ವೈದ್ಯಕೀಯ ಕಾಲೇಜುಗಳು ಇರುವುದರಿಂದ ಆರೋಗ್ಯ ಪ್ರವಾಸೋದ್ಯಮಕ್ಕೂ ಸೂಕ್ತ ವಾತಾವರಣ ಇಲ್ಲಿದೆ. ವಿಮಾನ ನಿಲ್ದಾಣ, ರೈಲ್ವೆ, ಸಾಲು ಸಾಲು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಬೃಹತ್‌ ಬಂದರು ಇರುವುದರಿಂದ ನಾಲ್ಕು ಬಗೆಯ ಸಂಚಾರ ಸಂಪರ್ಕ
ವಿದೆ. ಮೂಲಸೌಕರ್ಯದ ದೃಷ್ಟಿಯಿಂದ ಕೈಗಾರಿಕಾ ಪ್ರಗತಿಗೆ ಪ್ರಶಸ್ತ ಪ್ರದೇಶ. ಆದರೆ, ನಿರಂತರವಾಗಿ ನಡೆಯುತ್ತಿರುವ ಕೊಲೆ, ಕೋಮು ಸಂಘರ್ಷದ ಕಾರಣಕ್ಕೆ ಕರಾವಳಿ ಎಂದರೆ ಬೇಡಪ್ಪಾ ಎಂಬ ಮನಸ್ಥಿತಿ ಹೊರಗಿನವರಿಗೆ ಬಂದು ಬಿಟ್ಟಿದೆ. ಹೀಗಾಗಿ ಉದ್ಯಮದ ಬೆಳವಣಿಗೆ, ಉದ್ಯೋಗ ಸೃಷ್ಟಿಯ ಅವಕಾಶಗಳ ಮೇಲೆ ಕರಾಳ ಛಾಯೆ ಆವರಿಸಿದೆ ಎಂಬ ಅಭಿಮತ ವ್ಯಾಪಕವಾಗಿದೆ.

‘ಏಳೆಂಟು ವರ್ಷಗಳ ಹಿಂದೆ ವರ್ಷದ ಎಲ್ಲ ತಿಂಗಳಿನಲ್ಲಿ ಹೋಟೆಲ್, ವಸತಿಗೃಹಗಳು ತುಂಬಿಕೊಂಡಿರುತ್ತಿದ್ದವು. ಈಗ ಮದುವೆಗಳು ಹೆಚ್ಚಾಗಿ ನಡೆಯುವ ಕಾಲದಲ್ಲಿ ಮಾತ್ರ ಭರ್ತಿಯಾಗಿರುತ್ತವೆ. ಉಳಿದ ದಿನಗಳಲ್ಲಿ ಶೇಕಡ 50ರಷ್ಟು ಕೊಠಡಿಗಳೂ ಭರ್ತಿಯಾಗುವುದಿಲ್ಲ..’ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೋಟೆಲ್, ವಸತಿಗೃಹಗಳ ಮಾಲೀಕರ ಒಮ್ಮತದ ಅಭಿಪ್ರಾಯ.

‘ನಮ್ಮ ಹೆಸರು ಉಲ್ಲೇಖಿಸಬೇಡಿ’ ಎಂದು ದಯನೀಯವಾಗಿ ಕೇಳಿಕೊಳ್ಳುವ ಅವರು, ನೋಟು ರದ್ದು, ಜಿಎಸ್‌ಟಿ ಹೇರಿಕೆ ಜತೆಗೆ ಜನರೇ ಬಾರದ ಪರಿಸ್ಥಿತಿ ಉದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ ಎಂದೂ ತಮ್ಮ ಕಷ್ಟ ತೋಡಿಕೊಳ್ಳುತ್ತಾರೆ.

‘ಪ್ರವಾಸೋದ್ಯಮ ಒಂದು ಕಾಲದಲ್ಲಿ ಉತ್ತುಂಗದಲ್ಲಿತ್ತು. ಪಬ್‌, ಡ್ಯಾನ್ಸ್ ಬಾರ್‌, ಲೈವ್ ಬ್ಯಾಂಡ್‌, ಕ್ಯಾಬರೆ ಕೇಂದ್ರಗಳು ಇದ್ದುದರಿಂದ ಜಿಲ್ಲೆಯ ಜನರು ಮಾತ್ರವಲ್ಲ; ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಪಕ್ಕದ ಕಾಸರಗೋಡು ಜಿಲ್ಲೆಯವರೂ ಇಲ್ಲಿಗೆ ಬಂದು ಹೋಗುತ್ತಿ
ದ್ದರು. ಯಾವಾಗ ಹೋಂ ಸ್ಟೇ, ಪಬ್ ಮೇಲೆ ಹಿಂದುತ್ವ ಪರ ಸಂಘಟನೆಗಳು ದಾಳಿ ನಡೆಸಿದವೋ ಆ ನಂತರ ಇಲ್ಲಿಗೆ ಬರಲು ಜನ ಹೆದರುತ್ತಿದ್ದಾರೆ’ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು.

‘ಪಬ್‌, ಡ್ಯಾನ್ಸ್ ಬಾರ್ ಕತೆ ಬಿಟ್ಟುಬಿಡಿ. ವಾರಾಂತ್ಯ ಪಾರ್ಟಿ ಅಥವಾ ಹುಟ್ಟುಹಬ್ಬದ ಸಂಭ್ರಮಾಚರಣೆಗಳನ್ನು ಕಾಲೇಜು ವಿದ್ಯಾರ್ಥಿಗಳು ಹೋಟೆಲ್‌ಗಳಲ್ಲಿ ಆಚರಿಸಿಕೊಳ್ಳುತ್ತಿದ್ದರು. ಕುಟುಂಬದವರೆಲ್ಲ ಸೇರಿಕೊಂಡು ಇಂತಹ ಸಡಗರವನ್ನು ಹೋಟೆಲ್‌ನ ಹಾಲ್‌ನಲ್ಲಿ ಹಮ್ಮಿಕೊಳ್ಳುತ್ತಿದ್ದರು. ವಾರಕ್ಕೆ ಇಂತಹ 2–3 ಸಮಾರಂಭಗಳು ನಡೆಯುತ್ತಿದ್ದವು. ಅಲ್ಲಿ ಯಾವುದೇ ಅಶ್ಲೀಲ ಅಥವಾ ಅಹಿತಕರ ಘಟನೆಗಳೂ ನಡೆಯುತ್ತಿ
ರಲಿಲ್ಲ. ಕಾಲೇಜಿನ ವಿದ್ಯಾರ್ಥಿಗಳು ಎಂದ ಮೇಲೆ ಎಲ್ಲ ಸಮುದಾಯವರೂ ಇರುತ್ತಾರೆ. ಅಂತಹ ಒಂದೆರಡು ಸಮಾರಂಭಗಳಲ್ಲಿ ಮುಸ್ಲಿಂ ಹುಡುಗರು ಇದ್ದರು ಎಂಬ ಕಾರಣಕ್ಕೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದರು. ಜತೆಗೆ ಟಿ.ವಿ ಕ್ಯಾಮೆರಾಗಳು ಬಂದವು. ಅಲ್ಲಿದ್ದವರೆಲ್ಲ ಏನೋ ಅಕ್ರಮ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಯಿತು. ಅದೇ ಕೊನೆ. ಈಗ ಯಾವುದೇ ವಿದ್ಯಾರ್ಥಿಗಳ ಗುಂಪು ಇಂತಹ ಸಮಾರಂಭ ಹಮ್ಮಿಕೊಳ್ಳುವುದೇ ಇಲ್ಲ. ಈ ಮೂಲದಿಂದ ಆಗುತ್ತಿದ್ದ ವಹಿವಾಟಿಗೆ ಸಂಪೂರ್ಣ ಕಡಿವಾಣ ಬಿದ್ದಿತು. ಒಟ್ಟಾರೆ ವಹಿವಾಟಿನ ಮೇಲೆ ಶೇ 25ರಿಂದ 35ರಷ್ಟು ಹೊಡೆತ ಬಿದ್ದಿದೆ’ ಎಂದು ಹೆಸರು ಹೇಳಲು ಹಿಂಜರಿದ ತ್ರಿಸ್ಟಾರ್ ಹೋಟೆಲ್‌ನ ಮಾಲೀಕರು ಹೇಳಿದರು.

ಬೆಂಗಳೂರಿನತ್ತ ಮುಖ: ಮುಂಬೈ ಜತೆಗಿನ ನಂಟಿನ ಕಾರಣಕ್ಕೆ ಮಂಗಳೂರು ಮತ್ತು ಉಡುಪಿಯ ಕೆಲವು ಕಡೆಗಳಲ್ಲಿ ಕ್ಯಾಬರೆ, ಡ್ಯಾನ್ಸ್ ಬಾರ್‌ಗಳು ನಡೆಯುತ್ತಿದ್ದವು. ಅತ್ಯುತ್ತಮ ಲೈವ್‌ ಬ್ಯಾಂಡ್‌ ಕೇಳಿಸಿಕೊಂಡು, ಕುಣಿದು ಕುಪ್ಪಳಿಸಿ ಸಂಭ್ರಮಿಸ ಬೇಕಾದರೆ ಮಂಗಳೂರಿಗೆ ಹೋಗಬೇಕು ಎಂಬ ಭಾವನೆ ಯುವ ಸಮುದಾಯದಲ್ಲಿತ್ತು.

ಈ ಕಾರಣಕ್ಕಾಗಿ ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆಯ ಯುವಕರು ಕ್ಯಾಬರೆ ನೋಡಲು ಮಂಗಳೂರಿಗೆ ದೌಡಾಯಿಸುತ್ತಿದ್ದರು. ಹೋಮ್ ಸ್ಟೇ ಮೇಲೆ ದಾಳಿ ನಡೆದ ಬಳಿಕ ಯುವಕರು ಬೆಂಗಳೂರು–ಗೋವಾ ಕಡೆ ಮುಖ ಮಾಡಿದ್ದಾರೆ. ಪರಿಸ್ಥಿತಿ ಅಷ್ಟರಮಟ್ಟಿಗೆ ಬದಲಾಗಿದೆ ಎನ್ನುತ್ತಾರೆ ಹಿಂದೆ ಎರಡುಮೂರು ಮಹಡಿಗಳಲ್ಲಿ ಪಬ್ ನಡೆಸುತ್ತಿದ್ದ ಹೆಸರುವಾಸಿ ಪಬ್‌ನ ಮಾಲೀಕರೊಬ್ಬರು.

ಆದರೆ, ಪಕ್ಕದ ಮಣಿಪಾಲ ಮಾತ್ರ ಇದಕ್ಕೆ ಹೊರತಾಗಿದೆ. ಕರ್ನಾಟಕಕ್ಕಿಂತ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಬ್‌, ಡ್ಯಾನ್ಸ್ ಬಾರ್‌ಗಳಿಗೆ ಅಲ್ಲಿ ಯಾವುದೇ ಅಡ್ಡಿಯಿಲ್ಲ.

ಈ ಬಗೆಯ ಅನೇಕ ದಾಳಿಗಳನ್ನು ನಡೆಸುವ ಮತ್ತು ಹೊಣೆ ಹೊತ್ತುಕೊಳ್ಳುತ್ತಿರುವುದು ಬಜರಂಗದಳದ ಕಾರ್ಯಕರ್ತರು. ಈ ಕುರಿತು ಸಂಘಟನೆಯ ಪ್ರಾಂತ್ಯ ಸಂಚಾಲಕ ಶರಣ್‌ ಪಂಪ್‌ ವೆಲ್‌ ಅವರನ್ನು ಪ್ರಶ್ನಿಸಿದಾಗ, ‘ಅದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಅಲ್ಲಿ ನಡೆಯುತ್ತಿರುವುದು ನಮ್ಮ ಗಮನದಲ್ಲಿದೆ. ದಾಳಿ ನಡೆಸಿದರೆ ಯಾಕೆ ಎಂದು ನೀವೇ ನಮ್ಮನ್ನು ಪ್ರಶ್ನಿಸುತ್ತೀರಿ, ಈಗ ನಡೆಯಯಲು ಬಿಟ್ಟಿದ್ದು ಯಾಕೆ ಎಂದು ಕೇಳುತ್ತೀರಲ್ಲಾ’ ಎಂದು ನಮ್ಮ ಮೇಲೆ ಮುಗಿಬಿದ್ದರು.

‘ದಾಳಿ ಮಾಡಬೇಕು ಎಂಬುದು ನಮ್ಮ ನಿಲುವಲ್ಲ. ನಿಮ್ಮ ದ್ವಂದ್ವ ಧೋರಣೆ ಹಿಂದೆ ನಿರ್ದಿಷ್ಟ ಲಾಬಿ ಕೆಲಸ ಮಾಡುತ್ತಿದೆಯೇ’ ಎಂಬುದು ನಮ್ಮ ಪ್ರಶ್ನೆ ಎಂದಿದ್ದಕ್ಕೆ, ‘ಅಲ್ಲಿನ ಘಟಕ ಮುಂದಿನ ದಿನಗಳಲ್ಲಿ ಅದರ ವಿರುದ್ಧ ಹೋರಾಟ ನಡೆಸಲಿದೆ’ ಎಂದೂ ಶರಣ್ ಪ್ರತಿಕ್ರಿಯಿಸಿದರು.

ಸಿಕ್ಕಾಪಟ್ಟೆ ಹೊಡೆತ: ವ್ಯಾಪಾರ, ಕೈಗಾರಿಕೆ ಸ್ಥಾಪನೆಯಾಗಬೇಕಾದರೆ ಶಾಂತ ವಾತಾವರಣ ಇರಬೇಕು, ಕಾನೂನು ಮತ್ತು ಸುವ್ಯವಸ್ಥೆ ತಹಬಂದಿಯಲ್ಲಿ ಇರಬೇಕು. ಆಗ ಮಾತ್ರ ಹೂಡಿಕೆದಾರರು ಬರುತ್ತಾರೆ. ಹೂಡಿದ ಬಂಡವಾಳಕ್ಕೆ ಸಂಚಕಾರ ಬರುವುದಿಲ್ಲ ಎಂಬ ಖಾತ್ರಿ ಇದ್ದರೆ ಉದ್ಯಮ ಬೆಳೆಯುತ್ತದೆ. ಆದರೆ ಕರಾವಳಿಯಲ್ಲಿ ಯಾವಾಗ ಸಂಘರ್ಷ, ಯಾವಾಗ ಗಲಾಟೆ ನಡೆಯುತ್ತದೋ ಎಂಬುದೇ ಗೊತ್ತಾಗುವುದಿಲ್ಲ ಎಂಬ ಭಾವನೆ ಹೊರಗಿನ ಜಿಲ್ಲೆಯವರಿಗೆ ಬಂದಿದೆ. ಹೀಗಾಗಿ ಉದ್ಯಮದ ಮೇಲೆ ಹೊಡೆತ ಬಿದ್ದಿದೆ ಎಂದು
ಹೆಸರು ಹೇಳಲಿಚ್ಛಿಸದ ಉದ್ಯಮಿಯೊಬ್ಬರು ಹೇಳಿದರು.

ಗೌಡ ಸಾರಸ್ವತ ಸಮುದಾಯದ ಪ್ರಮುಖರು, ವಿಶ್ವ ಕೊಂಕಣಿ ಕೇಂದ್ರದ ಮುಖ್ಯಸ್ಥರೂ ಆದ ಬಸ್ತಿ ವಾಮನ ಶೆಣೈ, ‘ನನಗೀಗ 84 ವರ್ಷ. ನಾನು ಇಂತಹ ಪರಿಸ್ಥಿತಿಯನ್ನು ಹಿಂದೆ ನೋಡಿದ್ದಿಲ್ಲ. ಹಿಂದೆ ಯಾವಾಗಲೋ ಒಂದೊಂದು ಘಟನೆ ನಡೆಯುತ್ತಿತ್ತು. ಯಾವಾಗ ಏನಾ
ಗುತ್ತೋ ಎಂಬ ಆತಂಕದ ವಾತಾವರಣ ಇದೆ. ವ್ಯಾಪಾರಸ್ಥರು ಬಯುಸುವುದು ಶಾಂತಿಯನ್ನಲ್ಲವೇ? ಕುಡ್ಲ ಬೊಡ್ಚಿ (ಮಂಗಳೂರು ಬೇಡ) ಎಂಬ ಸ್ಥಿತಿ ವ್ಯಾಪಾರಸ್ಥರಲ್ಲಿ ಬಂದು ಬಿಟ್ಟಿದೆ’ ಎಂದು ವಿಷಾದದಿಂದಲೇ ಹೇಳಿದರು.

ಕೆನರಾ ಕಾಮರ್ಸ್ ಚೇಂಬರ್ಸ್‌ನ ನಿಕಟಪೂರ್ವ ಅಧ್ಯಕ್ಷ ಜೀವನ್ ಸಾಲ್ಡಾನಾ, ಕರಾವಳಿಯ ಕೋಮು ವೈಷಮ್ಯದ ಪರಿಸ್ಥಿತಿಯಿಂದಾಗಿ ಸಿಕ್ಕಾ ಪಟ್ಟೆ ಹೊಡೆತ ಬಿದ್ದಿದೆ. ಕೈಗಾರಿಕೆ ಬೆಳವಣಿಗೆ ದರ ಕುಂಠಿತವಾಗಿದೆ ಎಂದು ಪ್ರತಿಪಾದಿಸಿದರು.

‘ಆರ್ಥಿಕ ಹಿನ್ನಡೆ, ನೋಟು ರದ್ದು ಕ್ರಮ, ಜಿಎಸ್‌ಟಿ ಜಾರಿಯಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರಿಸ್ಥಿತಿ ಕಷ್ಟಕರವಾಗಿದೆ. ಇದರ ಜತೆಗೆ ಅಶಾಂತ ಪರಿಸ್ಥಿತಿ ನಮ್ಮ ಊರಿಗೆ ಕೆಟ್ಟ ಹೆಸರು ತಂದಿದೆ. ಈ ಎಲ್ಲ ಕಾರಣಕ್ಕೆ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ದುಡಿಯುವ ಕಸುವು ಇರುವ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ಈ ಕೈಗಾರಿಕೆಗಳು ಆರಂಭವಾಗುತ್ತಿಲ್ಲ ಎಂದರೆ ಪ್ರತಿ ವರ್ಷ ಈ ಭಾಗದಲ್ಲಿ ವಿವಿಧ ಪದವಿ ಪಡೆಯುವ 20,000 ಮಂದಿ ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸುತ್ತಾರೆ.

ಕಾಯಂ ಉದ್ಯೋಗ ಅಲ್ಲದಿದ್ದರೂ ಪ್ರವಾಸೋದ್ಯಮ ತಾತ್ಕಾಲಿಕ ಉದ್ಯೋಗ ನೀಡುತ್ತಿತ್ತು. ಆದರೆ, ಕರಾವಳಿಯಲ್ಲಿ ನಿತ್ಯ ನಡೆಯುವ ಘರ್ಷಣೆ, ಆತಂಕದ ಛಾಯೆಯಿಂದಾಗಿ ಪ್ರವಾಸೋದ್ಯಮ ನೆಲ ಕಚ್ಚಿದೆ. ನವೋದ್ಯಮಗಳು ಆರಂಭವಾಗುತ್ತಿಲ್ಲಎಂದು ವಿವರಿಸುತ್ತಾರೆ.

ದೊಡ್ಡ ದೊಡ್ಡ ಕಂಪೆನಿಗಳು ಬಂದಿರುವುದು ಹೌದು. ಆದರೆ, ಅವೆಲ್ಲವೂ ಯಂತ್ರ ಆಧಾರಿತ ಕೈಗಾರಿಕೆಗಳಾಗಿದ್ದು, ದೊಡ್ಡ ಸಂಖ್ಯೆಯ ಉದ್ಯೋಗ ಸೃಷ್ಟಿಯಾಗಿಲ್ಲ. ಅದರ ಬದಲು ವಿಪ್ರೊ, ಟಿಸಿಎಸ್ ನಂತಹ ಐ.ಟಿ ಕಂಪೆನಿಗಳು ಬಂದಿದ್ದರೆ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಗೋವಾ, ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲಿ ಕರಾವಳಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ, ಇಲ್ಲಿ ಹಿನ್ನಡೆಯಾಗಲು ಕೋಮು ಸಂಘರ್ಷವೇ ಕಾರಣ ಎಂದೂ ಅವರು ಪ್ರತಿಪಾದಿಸಿದರು.

ಹಿನ್ನಡೆ ಒಪ್ಪದ ಸಂಸದ

ಕೋಮು ಸಂಘರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೈಗಾರಿಕೆಗಳು, ಉದ್ಯಮ ಪ್ರವಾಸೋದ್ಯಮದ ಪ್ರಗತಿಯಲ್ಲಿ ಹಿನ್ನಡೆಯಾಗುತ್ತಿದೆ ಎಂಬ ಟೀಕೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಒಪ್ಪುವುದಿಲ್ಲ. ‘ಯಾವುದೇ ಕೈಗಾರಿಕೆಗಳು ಈ ಕಾರಣಕ್ಕೆ ಇಲ್ಲಿಂದ ವಾಪಸ್ ಹೋಗಿಲ್ಲ. ಇಲ್ಲಿ 10 ವೈದ್ಯಕೀಯ, 18 ಎಂಜಿನಿಯರಿಂಗ್ ಕಾಲೇಜು, ಐದು ವಿಶ್ವವಿದ್ಯಾಲಯಗಳು ಇವೆ. ಎಂಆರ್‌ಪಿಎಲ್, ಎಂಸಿಎಫ್, ಕೆಐಒಸಿಎಲ್, ಎನ್ಎಂಪಿಟಿ, ಸಿಪಿಸಿಟಿಆರ್, ಇನ್ಫೋಸಿಸ್ ಕ್ಯಾಂಪಸ್ ಇದೆ. ಪ್ಲಾಸ್ಟಿಕ್ ಪಾರ್ಕ್ ಹಾಗೂ ಬಯೋಕಾನ್ ಸಂಸ್ಥೆ ಘಟಕಗಳು ಆರಂಭವಾಗುತ್ತಿವೆ. ಮಂಗಳೂರು ಎಂದರೆ ಭಯಾನಕ ಎಂದು ಚಿತ್ರಿಸುವ ಹಿಂದೆ ಷಡ್ಯಂತ್ರ ಇದೆ’ ಎಂದು ಪ್ರತಿಪಾದಿಸುತ್ತಾರೆ.

ದೊಡ್ಡ ಕೈಗಾರಿಕೆಗಳೇ ಬರುತ್ತಿಲ್ಲ

ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಮಾಡುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾದ ದೊಡ್ಡ ಕೈಗಾರಿಕೆ. 1988ರಲ್ಲಿ ಆರಂಭವಾದ ಎಂಆರ್‌ಪಿಎಲ್‌ 2003ರಲ್ಲಿ ವಿಸ್ತರಣೆಯಾಗಿತ್ತು. ಅದಕ್ಕೆ ‍ಪೂರಕವಾಗಿ ಕೆಲವು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿದೆ. ರಾಸಾಯನಿಕಗಳನ್ನು ಉತ್ಪಾದಿಸುವ ಬಿಎಎಸ್‌ಎಫ್‌ ಕಾರ್ಖಾನೆ ಹೊರತಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಸುವಂತಹ ಕೈಗಾರಿಕೆಗಳೇ ಆರಂಭವಾಗಿಲ್ಲ ಎಂಬ ಮಾಹಿತಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳಿಂದ ಲಭ್ಯವಾಯಿತು.

ಇನ್ಫೋಸಿಸ್‌, ಕಾಗ್ನಿಜೆಂಟ್ ಟೆಕ್ನಾಲಜೀಸ್, ದಿಯಾ ಸಿಸ್ಟಮ್ಸ್ ಸೇರಿದಂತೆ ಸಾಫ್ಟ್‌ವೇರ್‌ ಕಂಪೆನಿಗಳ ಒಂಬತ್ತು ಬೃಹತ್‌ ಪ್ರಮಾಣದ ಘಟಕಗಳು ಮಂಗಳೂರಿನಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ದೊಡ್ಡ ಪ್ರಮಾಣದ ಸಾಫ್ಟ್‌ವೇರ್‌ ಉದ್ದಿಮೆ ಆರಂಭಿಸಲು ಆಸಕ್ತಿ ತೋರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

‘ಹೂಡಿಕೆದಾರರು ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳದೇ ಇರಲು ಕೋಮು ಸಂಘರ್ಷ ಒಂದೇ ಕಾರಣ ಎಂದು ನಿಖರವಾಗಿ ಹೇಳುವುದು ಸಾಧ್ಯ. ಜಮೀನಿನ ಕೊರತೆ ಸೇರಿದಂತೆ ಬೇರೆ ಸಮಸ್ಯೆಗಳೂ ಇವೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಪ್ರತಿಕ್ರಿಯಿಸಿದರು.

ನಾಳಿನ ಸಂಚಿಕೆಗೆ– ಪ್ರೇಮಿಗಳಿಗೆ ಗುದ್ದು: ಜನ ವಿರೋಧವೇ ಮದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT