ನವದೆಹಲಿ: ‘₹500 ಮತ್ತು ₹1000 ಮುಖಬೆಲೆಯ ರದ್ದಾದ ನೋಟುಗಳಲ್ಲಿ ಬ್ಯಾಂಕ್ಗೆ ವಾಪಸಾದ ನೋಟುಗಳ ಮೌಲ್ಯ ಎಷ್ಟು ಎಂಬುದನ್ನು ಯಾವಾಗ ಹೇಳುತ್ತೀರಿ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಉರ್ಜಿತ್ ಪಟೇಲ್ ಅವರನ್ನು ಸಂಸದೀಯ ಸಮಿತಿಯ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
2016ರ ನವೆಂಬರ್ನಲ್ಲಿ ನೋಟು ರದ್ದತಿ ಮಾಡಲಾಗಿತ್ತು. 2017ರ ಜುಲೈಯಲ್ಲಿ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿದ್ದ ಉರ್ಜಿತ್ ಅವರು, ‘ನೋಟುಗಳ ಎಣಿಕೆ ಮಾಡಲಾಗುತ್ತಿದೆ. ಹಾಗಾಗಿ ಈಗ ಎಷ್ಟು ಹಣ ವಾಪಸ್ ಬಂದಿದೆ ಎಂದು ಹೇಳಲಾಗದು’ ಎಂದಿದ್ದರು.
ಸಂಸದೀಯ ಸಮಿತಿಯ ಮುಂದೆ ಉರ್ಜಿತ್ ಅವರು ಬುಧವಾರ ಮತ್ತೆ ಹಾಜರಾದರು. ಈ ಬಾರಿ, ಆಡಳಿತಾರೂಢ ಎನ್ಡಿಎ ಮಿತ್ರಪಕ್ಷವಾದ ಶಿವಸೇನಾ ಸಂಸದ ಚಂದ್ರಕಾಂತ ಖೈರೆ ಅವರು ಬ್ಯಾಂಕುಗಳಿಗೆ ವಾಪಸಾದ ರದ್ದಾದ ನೋಟುಗಳ ಮೌಲ್ಯ ಎಷ್ಟು ಎಂದು ಪ್ರಶ್ನಿಸಿದರು.