ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ಹಣ, ತೋಳ್ಬಲ ಕೆಲಸ ಮಾಡಿದ್ದು, ನನ್ನ ಗೆಲುವು ಕಷ್ಟ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸೋಮವಾರ ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು.
ಕ್ಷೇತ್ರದಲ್ಲಿ ಕಡೆಯ ಎರಡು ದಿನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗಿ ನನ್ನ ವಿರುದ್ಧ ತಂತ್ರ ರೂಪಿಸಿದವು. ಡಿ.ಕೆ. ಶಿವಕುಮಾರ್ ರ ಕಪ್ಪು ಹಣ ಇಡೀ ಕ್ಷೇತ್ರದಲ್ಲಿ ಹರಿದಾಡಿತು. ನನ್ನ ಜೊತೆಗಿದ್ದ 20ಕ್ಕೂ ಹೆಚ್ಚು ಮುಖಂಡರನ್ನು ಕಾಂಗ್ರೆಸ್ ಖರೀದಿ ಮಾಡಿತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈ ಚುನಾವಣೆಯಲ್ಲಿ ಡಿಕೆಎಸ್ ಸಹೋದರರು ಎಚ್.ಎಂ. ರೇವಣ್ಣಗೆ ನನ್ನನ್ನು ರಾಜಕೀಯವಾಗಿ ಮುಗಿಸುವ ಸುಪಾರಿ ಕೊಟ್ಟರು. ಕುಮಾರಸ್ವಾಮಿ ಅದನ್ನು ಸದ್ಬಳಕೆ ಮಾಡಿಕೊಂಡರು ಎಂದು ಭಾವುಕರಾದರು
‘ಯಾರೇ ಗೆದ್ದರೂ ಕೂದಲೆಳೆ ಅಂತರದ ಗೆಲುವಷ್ಟೇ. ಒಂದು ವೇಳೆ ನಾನು ಸೋತರೂ ಬಿಜೆಪಿಯಲ್ಲಿಯೇ ಉಳಿಯುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಉಪ ಚುನಾವಣೆ ನಡೆದಲ್ಲಿ ಪಕ್ಷ ಬಯಸಿದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧನಿದ್ದೇನೆ’ ಎಂದರು.