ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುಕೋಟೆಯಲ್ಲಿ ನೇತಾಜಿ ವಸ್ತುಸಂಗ್ರಹಾಲಯ

ನೇತಾಜಿ 122ನೇ ಜನ್ಮ ದಿನಾಚರಣೆ; ಪ್ರಧಾನಿಯಿಂದ ಉದ್ಘಾಟನೆ
Last Updated 23 ಜನವರಿ 2019, 18:20 IST
ಅಕ್ಷರ ಗಾತ್ರ

ನವದೆಹಲಿ: 122ನೇ ಜನ್ಮದಿನಾಚರಣೆ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಿದರು.ಐತಿಹಾಸಿಕ ಕೆಂಪುಕೋಟೆಯಲ್ಲಿ ಈ ಮ್ಯೂಸಿಯಂ ನೆಲೆಗೊಂಡಿದೆ.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸುವ ಯಾದ್–ಎ–ಜಲಿಯನ್ ಮ್ಯೂಸಿಯಂ, ಭಾರತೀಯ ಕಲೆಯನ್ನು ಪ್ರತಿಬಿಂಬಿಸುವ ದೃಶ್ಯಕಲಾ ಮ್ಯೂಸಿಯಂಗಳನ್ನೂ ಪ್ರಧಾನಿ ಇದೇ ವೇಳೆ ಲೋಕಾರ್ಪಣೆ ಮಾಡಿದರು.

ಕೆಂಪುಕೋಟೆಯಲ್ಲಿ ನಿರ್ಮಾಣವಾಗಿರುವ ಈ ಎಲ್ಲ ವಸ್ತುಸಂಗ್ರಹಾಲಯಗಳ ಸಂಕೀರ್ಣವನ್ನು ‘ಕ್ರಾಂತಿ ಮಂದಿರ’ ಎಂದು ಕರೆಯಲಾಗಿದೆ. ‘ಭಾರತ ಸ್ವಾತಂತ್ರ್ಯಕ್ಕಾಗಿ ಧೈರ್ಯದಿಂದ ಹೋರಾಡಿದ ಎಲ್ಲರಿಗೂ ಕ್ರಾಂತಿ ಮಂದಿರ ಅರ್ಪಣೆ’ ಎಂದು ಮೋದಿ ಅವರು ಟ್ವೀಟ್ ಮಾಡಿದ್ಧಾರೆ.

ಐಎನ್‌ಎ ಹಾಗೂ ನೇತಾಜಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಇಲ್ಲಿ ಇರಿಸಲಾಗಿದೆ. ಮರದ ಕುರ್ಚಿ, ಯೋಧರು ಬಳಸಿದ ಕತ್ತಿ, ಪದಕಗಳು, ಬ್ಯಾಡ್ಜ್, ಸಮವಸ್ತ್ರಗಳನ್ನು ಇದು ಒಳಗೊಂಡಿದೆ.ನೇತಾಜಿ ಹಾಗೂ ಎನ್‌ಐಎ ಕುರಿತು ತಯಾರಿಸಿರುವ ಸಾಕ್ಷ್ಯಚಿತ್ರವು, ಸ್ವಾತಂತ್ರ್ಯ ಯೋಧರ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಪ್ರವಾಸಿಗರಿಗೆ ನೆರವಾಗಲಿದೆ.

13 ಏಪ್ರಿಲ್, 1919ರಲ್ಲಿ ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಚಿತ್ರಣವನ್ನು ಯಾದ್–ಎ–ಜಲಿಯನ್ ಮ್ಯೂಸಿಯಂ ಕಟ್ಟಿಕೊಡಲಿದೆ.ಜಲಿಯನ್ ವಾಲಾಭಾಗ್‌ ಪ್ರತಿಕೃತಿಯನ್ನೂ ಇಲ್ಲಿ ನಿರ್ಮಿಸಲಾಗಿದೆ.

ಮೊದಲ ಜಾಗತಿಕ ಯುದ್ಧದಲ್ಲಿ ಭಾರತೀಯ ಯೋಧರು ತೋರಿದ ಶೌರ್ಯ, ಪರಾಕ್ರಮಗಳನ್ನು ತಿಳಿಯಲೂ ಈ ವಸ್ತುಸಂಗ್ರಹಾಲಯವು ವೇದಿಕೆ ಒದಗಿಸಿದೆ.

ನೇತಾಜಿ ಟೋಪಿ ಉಡುಗೊರೆ

ನೇತಾಜಿ ಅವರು ಧರಿಸಿದ್ದ ಟೋಪಿಯನ್ನು ಉಡುಗೊರೆಯಾಗಿ ನೀಡಿದ ಸುಭಾಷ್ ಚಂದ್ರಬೋಸ್ ಅವರ ಕುಟುಂಬಕ್ಕೆ ಪ್ರಧಾನಿ ಧನ್ಯವಾದ ಹೇಳಿದರು. ವಸ್ತುಸಂಗ್ರಹಾಲಯಕ್ಕೆ ಯುವಜನತೆ ಭೇಟಿ ನೀಡಿ, ಬೋಸ್ ಅವರ ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ಮೋದಿ ಅವರು ಕರೆ ಕೊಟ್ಟರು.

ಉಡುಗೊರೆಯಾಗಿ ಕೊಟ್ಟ ಟೋಪಿಯನ್ನು ಮೋದಿ ಅವರು ವಸ್ತುಸಂಗ್ರಹಾಲಯಕ್ಕೆ ನೀಡಿದ್ದು, ಅದನ್ನೂ ಪ್ರದರ್ಶನಕ್ಕೆ ಇಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT