ನವದೆಹಲಿ: ತಬ್ಲೀಗಿ ಜಮಾತ್ನ ಮುಖ್ಯಸ್ಥ ಮೌಲಾ ಸಾದ್ ಖಂಡಾಲ್ವಿ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು 'ಕೊಲೆಯಲ್ಲದ ದಂಡನೀಯ ಮಾನವಹತ್ಯೆ'ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಇವರು ರಾಷ್ಟ್ರ ರಾಜಧಾನಿಯಲ್ಲಿ ಧಾರ್ಮಿಕ ಸಮಾವೇಶ ಆಯೋಜಿಸಿದ್ದರು.ದೇಶದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲು ಈ ಸಮಾವೇಶವೂ ಮುಖ್ಯ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ತಬ್ಲೀಗಿ ಜಮಾತ್ನ 1,890 ಅನುಯಾಯಿಗಳು ದೇಶದಿಂದ ಹೊರಗೆ ಹೋಗುವುದನ್ನು ತಡೆಯಲು,ಪೊಲೀಸರು ಈಗಾಗಲೇ ಲುಕೌಟ್ ನೊಟೀಸ್ ಜಾರಿ ಮಾಡಿದ್ದಾರೆ.
ಮೌಲಾನಾ ಸಾದ್
ವಿಚಾರಣೆಗೆ ಹಾಜರಾಗುವಂತೆ ಮೌಲಾಸಾದ್ ಮತ್ತು ಇತರ 16 ಮಂದಿಗೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. 'ನಾವು ಹೋಂ ಕ್ವಾರಂಟೈನ್ನಲ್ಲಿದ್ದೇವೆ' ಎಂಬ ಕಾರಣ ಮುಂದಿಟ್ಟು ಮೌಲಾಸಾದ್ ಸೇರಿ 11 ಮಂದಿ ಈವರೆಗೆ ತನಿಖೆಗೆ ಹಾಜರಾಗಿಲ್ಲ.
ದೆಹಲಿಯ ನಿಜಾಮುದ್ದೀನ್ನಲ್ಲಿರುವ ತಬ್ಲೀಗಿ ಜಮಾತ್ನ ಪ್ರಧಾನ ಕಚೇರಿಯಲ್ಲಿ ಮಾರ್ಚ್ ತಿಂಗಳ ಕೊನೆಯ ದಿನಗಳಲ್ಲಿ ಸುಮಾರು 2,300 ಮಂದಿಯನ್ನು ತೆರವುಗೊಳಿಸಲಾಗಿತ್ತು. ನಿಜಾಮುದ್ದೀನ್ನಿಂದ ತಮ್ಮ ಸ್ವಗೃಹ ತಲುಪಿದವರು ಮತ್ತು ಅವರ ಸಂಪರ್ಕಕ್ಕೆ ಬಂದಿದ್ದ ಹಲವರಲ್ಲಿ ಕೋವಿಡ್-19 ಪತ್ತೆಯಾಗಿತ್ತು.
ದೇಶದ ವಿವಿಧೆಡೆದೊಡ್ಡ ಸಂಖ್ಯೆಯಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ತಬ್ಲಿಗಿ ಜಮಾತ್ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದತ್ತ ಬೊಟ್ಟು ಮಾಡಿದ್ದವು.