ಮುಂಬೈ: ವಿಮಾನ ಸೇವೆ ಪುನರಾರಂಭವಾದ ಬಳಿಕ ಆರಂಭದ ದಿನಗಳಲ್ಲಿ ಕ್ಯಾಬಿನ್ ಬ್ಯಾಗೇಜ್ಗೆ ಅವಕಾಶ ನೀಡಬಾರದು ಮತ್ತು ಕೋವಿಡ್ ಕುರಿತು ಪ್ರಯಾಣಿಕರಿಂದ ಸಮಗ್ರ ಮಾಹಿತಿ ಪಡೆಯಬೇಕು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಸಲಹೆ ಮಾಡಿದೆ.
ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯವಾಗಿ ಬಳಸಬೇಕು, ಎರಡು ಗಂಟೆ ಮೊದಲು ವಿಮಾನನಿಲ್ದಾಣ ತಲುಪಬೇಕು ಎಂಬುದು ವಾಣಿಜ್ಯ ಸೇವೆ ಪುನರಾರಂಭದ ಆರಂಭದಲ್ಲಿ ಪ್ರಯಾಣಿಕರು ಪಾಲಿಸಬೇಕಾದ ಕ್ರಮಗಳಿವು.
ಕೇಂದ್ರ ವಿಮಾನಯಾನ ಸಚಿವಾಲಯವು ಈ ಕುರಿತು ಸಮಗ್ರ ಕರಡು ನಿಯಮಗಳನ್ನು ರೂಪಿಸಿದೆ. ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ದೇಶದಲ್ಲಿ ಮಾರ್ಚ್ 25ರಿಂದ ವಿಮಾನ ಸೇವೆ ಬಂದ್ ಆಗಿದೆ.
ಆರೋಗ್ಯ ಸೇತು ಆ್ಯಪ್ನಲ್ಲಿ ಹಸಿರು ಸ್ಥಿತಿ, ವೆಬ್ ಚೆಕ್ ಇನ್, ಎಲ್ಲ ಪ್ರಯಾಣಿಕರ ದೇಹದ ಉಷ್ಣಾಂಶ ತಪಾಸಣೆ ನಡೆಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ, ಕ್ಯಾಬಿನ್ ಮತ್ತು ಕಾಕ್ಪಿಟ್ ಸಿಬ್ಬಂದಿ, ಭದ್ರತಾ ಸಿಬ್ಬಂದಿಗೂ ಇಂಥದೇ ನಿಯಮಗಳನ್ನು ರೂಪಿಸಲಾಗಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲುವಿಮಾನಯಾನ ಸಂಸ್ಥೆಗಳು, ನಿರ್ವಾಹಕರು ಸೇರಿದಂತೆ ಎಲ್ಲ ಭಾಗಿದಾರರ ಜೊತೆಗೆ ಚರ್ಚಿಸಿ ಈ ನಿಯಮಗಳನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಅಂತರ ಕಾಯ್ದುಕೊಳ್ಳುವಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮಧ್ಯದ ಆಸನವನ್ನು ಖಾಲಿ ಬಿಡಲಾಗುತ್ತದೆಯೇ ಎಂಬುದರ ಕುರಿತಂತೆ ನಿಯಮಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ವಿಮಾನಯಾನ ನಿಯಂತ್ರಣ ಪ್ರಾಧಿಕಾರವಾದ ಡಿಜಿಸಿಎ ಈ ಉರಿತು ಸಲಹೆ ನೀಡಿತ್ತು.