ನವದೆಹಲಿ: ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಕುರಿತು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನೀಡಿರುವ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ. ಪಕ್ಷದ ಸಂಸದರ ನಿಯಮಿತ ಸಭೆಗಳಿಂದ ದೂರ ಉಳಿಯಬೇಕು ಎಂದು ಪ್ರಜ್ಞಾ ಅವರಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯಿಂದಲೂ ಪ್ರಜ್ಞಾ ಅವರನ್ನು ಹೊರ ಹಾಕಲಾಗಿದೆ.
‘ಪ್ರಜ್ಞಾ ಅವರು ನಿನ್ನೆ ಸಂಸತ್ತಿನಲ್ಲಿ ನೀಡಿದಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಎಂದಿಗೂ ಇಂಥ ಹೇಳಿಕೆ ಅಥವಾ ಸಿದ್ಧಾಂತವನ್ನು ಸಮರ್ಥಿಸುವುದಿಲ್ಲ’ ಎಂದು ಜೆ.ಪಿ.ನಡ್ಡಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಜ್ಞಾ ಸಿಂಗ್ ‘ನಾನು ದೇಶಭಕ್ತ ಎಂದಿದ್ದು ಗೊಡ್ಸೆಗೆ ಅಲ್ಲ’ ಎಂದು ಹೇಳಿದ್ದರು. ನಡ್ಡಾ ಅವರ ಹೇಳಿಕೆಯುಪ್ರಜ್ಞಾ ಸಮರ್ಥನೆಯನ್ನು ಬಿಜೆಪಿ ಒಪ್ಪಿಕೊಂಡಿಲ್ಲ ಎಂಬುದನ್ನು ಸೂಚಿಸಿದೆ.
‘ಭಯೋತ್ಪಾದಕಿ’ ಎಂದ ರಾಹುಲ್ ಗಾಂಧಿ
ಪ್ರಜ್ಞಾ ಸಿಂಗ್ ಅವರ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ‘ಭಯೋತ್ಪಾದಕಿ ಪ್ರಜ್ಞಾ, ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿಯೇ ಇದು ಅತ್ಯಂತ ದುಃಖದ ದಿನ’ಎಂದು ಹೇಳಿದ್ದಾರೆ.
Terrorist Pragya calls terrorist Godse, a patriot.
— Rahul Gandhi (@RahulGandhi) November 28, 2019
A sad day, in the history of
India’s Parliament.
ಲೋಕಸಭೆಯಲ್ಲಿ ಪ್ರಜ್ಞಾ ಮಾತು
ಎಸ್ಪಿಜಿ ಕಾಯ್ದೆ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಬುಧವಾರ ನಡೆಯುತ್ತಿದ್ದ ಚರ್ಚೆ ವೇಳೆ ಡಿಎಂಕೆ ಸಂಸದ ಎ.ರಾಜಾ ಅವರು, ಮಹಾತ್ಮ ಗಾಂಧಿ ಹತ್ಯೆಗೆ ಕಾರಣವೇನೆಂದು ಗೋಡ್ಸೆ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಜ್ಞಾ ಠಾಕೂರ್, ‘ದೇಶಭಕ್ತರೊಬ್ಬರ ಉದಾಹರಣೆಯನ್ನು ನೀವು ನೀಡುವಂತಿಲ್ಲ’ ಎಂದು ಹೇಳಿದರು.
‘32 ವರ್ಷಗಳಿಂದ ಗಾಂಧಿ ವಿರುದ್ಧ ದ್ವೇಷವಿತ್ತು ಎಂಬುದನ್ನು ಅವರನ್ನು ಹತ್ಯೆ ಮಾಡಲು ನಿರ್ಧರಿಸುವುದಕ್ಕೂ ಮುನ್ನ ಗೋಡ್ಸೆ ಒಪ್ಪಿಕೊಂಡಿದ್ದ. ನಿರ್ದಿಷ್ಟ ತತ್ವದಲ್ಲಿ ನಂಬಿಕೆ ಇರಿಸಿದ್ದರಿಂದಾಗಿ ಗಾಂಧಿಯವರನ್ನು ಗೋಡ್ಸೆ ಹತ್ಯೆ ಮಾಡಿದ್ದ’ ಎಂದು ರಾಜಾ ಹೇಳಿದರು. ಈ ವೇಳೆ ಪ್ರಜ್ಞಾ ಮಧ್ಯಪ್ರವೇಶಿಸಿದ್ದಕ್ಕೆ ಪ್ರತಿಪಕ್ಷಗಳ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಬಿಜೆಪಿ ಸಂಸದರು ಪ್ರಜ್ಞಾ ಮನವೊಲಿಸಿ ಕುಳಿತುಕೊಳ್ಳುವಂತೆ ಮಾಡಿದರು.
ಬಳಿಕ ಮಾತನಾಡಿದ ಸ್ಪೀಕರ್ಓಂ ಬಿರ್ಲಾ, ‘ರಾಜಾ ಹೇಳಿಕೆಯಷ್ಟನ್ನೇ ಕಡತಕ್ಕೆ ಸೇರಿಸಿದ್ದೇನೆ. ಪ್ರಜ್ಞಾ ಹೇಳಿಕೆಯನ್ನು ಸೇರಿಸುವುದಿಲ್ಲ’ ಎಂದು ಹೇಳಿದರು.
ಗೋಡ್ಸೆ ಕುರಿತ ಹೇಳಿಕೆಗಾಗಿ ಪ್ರಜ್ಞಾ ಕ್ಷಮೆ ಕೋರಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಆಗ್ರಹಿಸಿತು.
ಹಿಂದೆಯೂ ಹೇಳಿದ್ದರು
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಗೋಡ್ಸೆಯನ್ನು ದೇಶಭಕ್ತ ಎಂದು ಪ್ರಜ್ಞಾ ಠಾಕೂರ್ ಹೊಗಳಿದ್ದರು. ಇದು ದೇಶದಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಸಹಪ್ರಜ್ಞಾರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.