ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಸಾಧನೆಗಳ ಉಲ್ಲೇಖಿಸಿದ ರಾಷ್ಟ್ರಪತಿ

ಬಜೆಟ್ ಅಧಿವೇಶನ ಉದ್ದೇಶಿಸಿ ರಾಮನಾಥ ಕೋವಿಂದ್ ಭಾಷಣ
Last Updated 31 ಜನವರಿ 2019, 20:33 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಗುರುವಾರ ಆರಂಭವಾದ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದು, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದರು. ರಫೇಲ್‌ ಯುದ್ಧ ವಿಮಾನ, ನಿರ್ದಿಷ್ಟ ದಾಳಿ, ಈಶಾನ್ಯ ಭಾರತದ ಅಭಿವೃದ್ಧಿ, ಪೌರತ್ವ ತಿದ್ದುಪಡಿಮಸೂದೆ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಮಾತನಾಡಿದರು.

ಉಡಾನ್‌ ಯೋಜನೆ, ಸ್ವಚ್ಛ ಭಾರತ್‌ ಅಭಿಯಾನ, ನೂತನ ರೈಲ್ವೆ ಲೈನುಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ರಫೇಲ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ, ಮುಂದಿನ ಸಾಲುಗಳಲ್ಲಿ ಕುಳಿತಿದ್ದ ಆಡಳಿತಾರೂಢ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಪ್ರಶಂಸಿಸಿದರು. ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದ್ದು, ಸರ್ಕಾರ ಇದನ್ನು ತಳ್ಳಿಹಾಕಿದೆ.

*ರಫೇಲ್ ಯುದ್ಧವಿಮಾನ ವಾಯುಪಡೆಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿದ್ದು, ಹಲವು ದಶಕಗಳ ನಂತರ, ಅತ್ಯಾಧುನಿಕ ಹೊಸ ತಲೆಮಾರಿನ ಯುದ್ಧವಿಮಾನವನ್ನು ಸ್ವಾಗತಿಸಲು ವಾಯುಪಡೆ ಸಜ್ಜಾಗಿದೆ.

* ಗಡಿಯಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸುವ ಮೂಲಕ, ಭಾರತ ತನ್ನ ಹೊಸ ನಿಯಮ ಮತ್ತು ತಾಂತ್ರಿಕ ನಿಲುವನ್ನು ಪ್ರದರ್ಶಿಸಿದೆ.

* ಕಳೆದ ನಾಲ್ಕು ವರ್ಷಗಳಲ್ಲಿ, ವಿದೇಶಗಳಲ್ಲಿ ಸಿಲುಕಿದ್ದ 2.26 ಲಕ್ಷ ಭಾರತೀಯರನ್ನು ರಕ್ಷಿಸಿ, ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.

* ಪೂರ್ವ ಹಾಗೂ ಈಶಾನ್ಯ ರಾಜ್ಯಗಳು ದೇಶದ ಹೊಸ ‘ಅಭಿವೃದ್ಧಿ ಎಂಜಿನ್‌ಗಳಾಗುವ’ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ಸರ್ಕಾರ ಭಾವಿಸುತ್ತದೆ.

* ಸಾರಿಗೆ ಮತ್ತು ಪ್ರವಾಸೋದ್ಯಮದ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಬದಲಾವಣೆ ತರಲು ಕಾರ್ಯನಿರ್ವಹಿಸಲಾಗುತ್ತಿದೆ.

* ತಾರತಮ್ಯಕ್ಕೊಳಗಾಗಿರುವ‍ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಅಲ್ಪಸಂಖ್ಯಾತರಿಗೆಪೌರತ್ವ ತಿದ್ದುಪಡಿ ಮಸೂದೆಯಿಂದ ನ್ಯಾಯ ದೊರಕಲಿದೆ.

**

ಇಸ್ರೊ ವಿಜ್ಞಾನಿಗಳಿಗೆ ಪ್ರಶಂಸೆ

ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ‘ಮಿಷನ್ ಗಗನಯಾನ’ಕ್ಕಾಗಿ ರಾಷ್ಟ್ರಪತಿ ಕೋವಿಂದ್ ಅವರು, ಇಸ್ರೊ ವಿಜ್ಞಾನಿಗಳು, ಎಂಜಿನಿಯರ್‌ಗಳಿಗೆ ಶುಭ ಹಾರೈಸಿದ್ದಾರೆ.

‘ಆಧುನಿಕ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಭಾರತದ ಸಾಧನೆಗಾಗಿ ವಿಜ್ಞಾನಿಗಳು, ಎಂಜಿನಿಯರ್‌ಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಉಪಗ್ರಹಗಳ ಉಡಾವಣೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವ ಮೂಲಕನಿರ್ದಿಷ್ಟವಾಗಿ ಇಸ್ರೊ ವಿಜ್ಞಾನಿಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ’ ಎಂದುಪ್ರಶಂಸಿಸಿದ್ದಾರೆ.

2021ರ ಡಿಸೆಂಬರ್‌ನಲ್ಲಿ ‘ಮಿಷನ್ ಗಗನಯಾನ’ ಉಡಾವಣೆ ಮಾಡಲು ನಿಗದಿಪಡಿಸಲಾಗಿದೆ.

**

ಕುಂಟುನೆಪಗಳಷ್ಟೆ: ಕಾಂಗ್ರೆಸ್

‘ಕೇಂದ್ರ ಸರ್ಕಾರ ತನ್ನ ಅಸಾಮರ್ಥ್ಯ ಮುಚ್ಚಿಕೊಳ್ಳಲು ನೀಡಿರುವ ಕುಂಟುನೆಪಗಳ ಸಾರಾಂಶ ಇದು’ ಎಂದು ರಾಷ್ಟ್ರಪತಿ ಭಾಷಣದ ಕುರಿತು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

ತನ್ನ ‘ಸುಳ್ಳು ಭರವಸೆಗಳಿಗೆ’ ರಾಷ್ಟ್ರಪತಿ ಭಾಷಣದ ಮೂಲಕ ವಿಶ್ವಾಸ ಗಳಿಸಿಕೊಳ್ಳಲು ಕೇಂದ್ರ ಯತ್ನಿಸುತ್ತಿದ್ದು ದುರದೃಷ್ಟಕರ
ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಎಲ್ಲಿದೆ ಬೆಳವಣಿಗೆ? ಭಾರತದಲ್ಲಿ ಎಲ್ಲವನ್ನೂ ಸಾಧಿಸಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT