ಬೆಂಗಳೂರು: ಸ್ನೇಹಿತನ ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ನಟ ಸುನಾಮಿ ಕಿಟ್ಟಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಜಾಮೀನು ಕೋರಿ ಪ್ರದೀಪ್ ಅಲಿಯಾಸ್ ಸುನಾಮಿ ಕಿಟ್ಟಿ, ಸಂತೋಷ ಅಲಿಯಾಸ್ ಶಾಂತಕುಮಾರ್ ಮತ್ತು ಅರ್ಜುನ ಅಲಿಯಾಸ್ ಮುತ್ತಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
‘ಘಟನೆ ನಡೆದದ್ದು 2018ನೇ ಫೆಬ್ರುವರಿ 25ರಂದು. ಆದರೆ, ಪೊಲೀಸ್ ಠಾಣೆಯಲ್ಲಿ 2018ರ ಮಾರ್ಚ್ 2ರಂದು ದೂರು ದಾಖಲಿ ಸಲಾಗಿದೆ. ಈಗಾಗಲೇ ತನಿಖೆ ಬಹುಮಟ್ಟಿಗೆ ಪೂರ್ಣಗೊಂಡಿದೆ. ಆದ್ದರಿಂದ ಆರೋಪಿಗಳನ್ನು ಇನ್ನೂ ಬಂಧನದಲ್ಲಿರಿಸುವುದು ಸಮ್ಮತವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಅರ್ಜಿದಾರರು, ₹ 1 ಲಕ್ಷ ಮೊತ್ತದ ಬಾಂಡ್, ಇಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಬೇಕು, ಸಾಕ್ಷ್ಯ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ’ ಎಂದು ಷರತ್ತು ವಿಧಿಸಲಾಗಿದೆ.
ಸುನಾಮಿ ಕಿಟ್ಟಿ ಪರ ಎಚ್.ಎಸ್.ಚಂದ್ರಮೌಳಿ ವಾದ ಮಂಡಿಸಿದರು.