ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆಗೆ 2022ರಲ್ಲಿ ನಡೆಯುವ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿ, ಪಕ್ಷ ಸಂಘಟನೆ ಬಲಪಡಿಸಲು ಹಲವಾರು ಕ್ರಮಗಳಿಗೆ ಮುಂದಾಗಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡುವ ಸಂಖ್ಯೆಯನ್ನು ಹೆಚ್ಚಿಸುವುದು, ವಾರದಲ್ಲಿ ಕನಿಷ್ಠ ಎರಡು ಬಾರಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅವರನ್ನು ಹುರಿದುಂಬಿಸುವುದು ಈ ಕಾರ್ಯಕ್ರಮದಲ್ಲಿ ಸೇರಿವೆ ಎಂದು ಕಾಂಗ್ರೆಸ್ ಮೂಲಗಳು ಭಾನುವಾರ ತಿಳಿಸಿವೆ.
ಇತ್ತೀಚೆಗೆ ರಾಯ್ಬರೇಲಿಯಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಪ್ರಿಯಾಂಕಾ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಕಾರ್ಯಕರ್ತರೇ ಹೊಣೆ ಎಂದು ಹರಿಹಾಯ್ದಿದ್ದರು. ಈ ಘಟನೆ ನಡೆದ ಕೆಲ ದಿನಗಳ ಬಳಿಕವೇ ಅವರು ಹೊಸ ತೀರ್ಮಾನ ತೆಗೆದುಕೊಂಡಿದ್ದಾರೆ.
ಎಐಸಿಸಿಯ ಉತ್ತರ ಪ್ರದೇಶದ ಪೂರ್ವಭಾಗದ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಅವರು, ತಮ್ಮ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶೀಘ್ರವೇ ಆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಕಾರ್ಯಕರ್ತರೊಂದಿಗೆ ನೇರ ಸಂವಹನ ನಡೆಸಲಿದ್ದಾರೆ.
‘ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಕುರಿತು ಆತ್ಮಾವಲೋಕನಾ ಸಭೆ ನಡೆಯಿತು. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯ ಹಾಗೂ ಸಂವಹನ ವೃದ್ಧಿಸುವ ಅಗತ್ಯ ಇದೆ ಎಂಬುದು ಸಭೆಯಲ್ಲಿ ವ್ಯಕ್ತವಾಯಿತು.