ಲಖನೌ: ‘ಅಯೋಧ್ಯೆ ವಿಚಾರದಲ್ಲಿ ಜನರ ಭಾವನೆಗಳಿಗೆ ಗೌರವ ನೀಡಿ, ಆದಷ್ಟು ಬೇಗ ರಾಮನ ದೇವಾಲಯವನ್ನು ಪಟ್ಟಣದಲ್ಲಿ ನಿರ್ಮಿಸಬೇಕು’ ಎಂದು ಉತ್ತರಪ್ರದೇಶದ ಧಾರ್ಮಿಕ ವ್ಯವಹಾರ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಆಗ್ರಹಿಸಿದ್ದಾರೆ.
‘ಸರ್ಕಾರ ಅಥವಾ ದೇಶದಲ್ಲಿರುವ ಯಾವುದೇ ಸಂಸ್ಥೆಯಿರಲಿ, ಜನರ ಭಾವನೆಗಳಿಗೆ ಗೌರವ ಕೊಡಬೇಕು. ಈ ಕಾರಣದಿಂದ ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮಮಂದಿರ ನಿರ್ಮಿಸಿ, ದೇಶದ ಭವ್ಯ ಇತಿಹಾಸವನ್ನು ಪುನರ್ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.
‘ಇತ್ತೀಚಿಗೆ ಅಯೋಧ್ಯೆಯಲ್ಲಿ ಆಯೋಜಿಸಿದ ದೀಪೋತ್ಸವ ಕಾರ್ಯಕ್ರಮದ ಮೂಲಕ ಇಡೀ ಜಗತ್ತಿಗೆ ಸಂದೇಶ ಕಳುಹಿಸಲಾಗಿದೆ. ಮರ್ಯಾದಾ ಪುರುಷೋತ್ತಮ ರಾಮನ ಜೀವನದಿಂದ ಜನರು ಪಾಠ ಕಲಿತುಕೊಳ್ಳಬೇಕು. ಆತನ ಜೀವನವನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ, ಆತ ನಮಗೆಲ್ಲರಿಗೂ ಆದರ್ಶ ವ್ಯಕ್ತಿ’ ಎಂದರು.
‘ಮೊಘಲ್,ಬ್ರಿಟಿಷ್ ಹಾಗೂ ಸ್ವಾತಂತ್ರ್ಯ ನಂತರವೂ ಅಯೋಧ್ಯೆ ಅಭಿವೃದ್ಧಿಗೆ ಯಾವುದೇ ಗಮನನೀಡಿಲ್ಲ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಪಟ್ಟಣದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ರಾಮಮಂದಿರ ನಿರ್ಮಿಸಿದರೆ, ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ, ಇದರಿಂದ ಈ ಭಾಗದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.