ಪುದುಚೇರಿ: ರಾಜ್ಯಭವನದ ಮುಂದೆ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ನಡೆಸುತ್ತಿರುವ ಧರಣಿ ಭಾನುವಾರ 5ನೇ ದಿನಕ್ಕೆ ಕಾಲಿಟ್ಟಿದೆ.
ಕಲ್ಯಾಣ ಯೋಜನೆಗಳು ಮತ್ತು ಅಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ಪ್ರಸ್ತಾವಗಳಿಗೆ ಅನುಮತಿ ನೀಡುವಲ್ಲಿ ರಾಜ್ಯಪಾಲೆ ಕಿರಣ್ ಬೇಡಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಧರಣಿ ನಡೆಸುತ್ತಿದ್ದಾರೆ.
ಧರಣಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿಭಾನುವಾರ ಹೇಳಿರುವ ಮುಖ್ಯಮಂತ್ರಿ ಇದೇ 20ರಿಂದ ‘ಜೈಲ್ ಭರೊ’ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
‘ರಾಜ್ಯಪಾಲೆ ಬೇಡಿ ಅವರು ಸರ್ಕಾರದ ಕಲ್ಯಾಣ ಯೋಜನೆಗಳ 39 ಪ್ರಸ್ತಾವಗಳಿಗೆ ಅನುಮತಿ ನೀಡಿಲ್ಲ. ಇವುಗಳಲ್ಲಿ ಉಚಿತ ಅಕ್ಕಿ ವಿತರಣೆ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿವೆ’ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಧರಣಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಬೇಡಿ, ‘ಧರಣಿ ಕಾನೂನುಬಾಹಿರ’ ಎಂದು ಹೇಳಿದ್ದಾರೆ. ಇದೇ 21 ರಂದು ಎಲ್ಲಾ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಬೇಡಿ ಅವರು 2016ರ ಮೇ ನಲ್ಲಿ ರಾಜ್ಯಪಾಲರಾಗಿ ನೇಮಕವಾದಾಗಿನಿಂದ ಮುಖ್ಯಮಂತ್ರಿ ಜತೆಗೆ ಹಲವು ಆಡಳಿತಾತ್ಮಕ ವಿಷಯಗಳಿಗೆ ಸಂಘರ್ಷ ನಡೆಸುತ್ತಲೇ ಬಂದಿದ್ದಾರೆ.