ಭುವನೇಶ್ವರ (ಪಿಟಿಐ): ಪುರಿ ನಗರದಲ್ಲಿ ಗುರುವಾರ ಜಗನ್ನಾಥ ದೇವರ ರಥಯಾತ್ರೆ ಶ್ರದ್ಧೆ, ಭಕ್ತಿ ಮತ್ತು ಬಿಗಿ ಭದ್ರತೆಯ ನಡುವೆ ನೆರವೇರಿತು.ಬಲಭದ್ರದೇವರು, ಜಗನ್ನಾಥ ದೇವರು ಮತ್ತು ದೇವಿ ಸುಭದ್ರೆಯ ಮೂರ್ತಿಗಳನ್ನು ಹೊತ್ತ ಮೂರು ರಥ ಗಳು ಬೃಹತ್ಮೆರವಣಿಗೆಯಲ್ಲಿ ಸಾಗಿದವು.
ಇತ್ತೀಚೆಗೆಷ್ಟೆ ಫನಿ ಬಿರುಗಾಳಿ ಅಪ್ಪಳಿಸಿ ನಗರದಲ್ಲಿ ನಾಶನಷ್ಟ ಸಂಭವಿಸಿ ಒಂದು ತಿಂಗಳ ಅಂತರದಲ್ಲಿ ಈ ರಥೋತ್ಸವ ನಡೆದಿದೆ. ಜಗನ್ನಾಥ ದೇವರು ನಂದಿಘೋಷ್ ರಥದಲ್ಲಿ, ಬಲಭದ್ರ ದೇವರು ತಾಳಧ್ವಜ ರಥದಲ್ಲಿ ಮತ್ತು ದೇವಿ ಸುಭದ್ರೆಯು ದರ್ಪದಳನ್ ರಥದಲ್ಲಿ ಸುದರ್ಶನ ದೇವರ ಜೊತೆಯಲ್ಲಿ ಮೆರವಣಿಗೆ ಹೊರಟ ದೃಶ್ಯ ಮನೋಹರವಾಗಿತ್ತು.
ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ದೇವರಿಗೆ ಪೂಜೆ ಸಲ್ಲಿಸಿದರು ಎಂದು ದೇವಸ್ಥಾನದ ಆಡಳಿತಾಧಿಕಾರಿ ಪಿ.ಕೆ. ಮೊಹಪಾತ್ರ ತಿಳಿಸಿದ್ದಾರೆ.