ಅಂಬಿಕಪುರ್(ಛತ್ತೀಸ್ಗಢ):ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರೊಂದಿಗೆ ನಡೆಸಿರುವ ಮಾತುಕತೆ ಹಾಗೂ ಸಹಿ ಮಾಡಿರುವ ಕುರಿತು ಚರ್ಚೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ನಗರದಲ್ಲಿ ಮಾತನಾಡಿದ ರಾಹುಲ್, ವಿವಾದಿತ ಹಗರಣದ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತನಾಡುವ ಸ್ಥಿತಿಯಲ್ಲಿ ಪ್ರಧಾನಿಯವರು ಇಲ್ಲ ಎಂದು ಟೀಕಿಸಿದರು.
‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆಎಲ್ಲಿ, ಯಾವಾಗ ಬೇಕಾದರೂ ಕೇವಲ 15 ನಿಮಿಷಗಳ ಕಾಲ ಚರ್ಚೆಗೆ ಬರುವಂತೆ ಮೋದಿ ಜೀ ಅವರನ್ನು ಆಹ್ವಾನಿಸುತ್ತೇನೆ. ಅನಿಲ್ ಅಂಬಾನಿ, ಫ್ರಾನ್ಸ್ ಅಧ್ಯಕ್ಷರ ಹೇಳಿಕೆ, ಎಚ್ಎಎಲ್, ಯುದ್ಧ ವಿಮಾನ ದರದ ಬಗ್ಗೆ ನಾನು ಮಾತನಾಡುತ್ತೇನೆ. ಪ್ರಧಾನಿಯವರು ಇದರ(ರಫೇಲ್ ಒಪ್ಪಂದ) ಹಿಂದೆ ಇದ್ದಾರೆ ಎಂಬುದನ್ನು ರಕ್ಷಣಾ ಸಚಿವರು ಸ್ಪಷ್ಟವಾಗಿ ಹೇಳಿರುವುದನ್ನು ಉಲ್ಲೇಖಿಸುತ್ತೇನೆ. ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಹೇಳುತ್ತೇನೆ. ಮಧ್ಯರಾತ್ರಿ 2 ಗಂಟೆ ವೇಳೆ ಸಿಬಿಐ ನಿರ್ದೇಶಕರನ್ನು ತೆಗೆದು ಹಾಕಿದ್ದರ ಬಗ್ಗೆ ಪ್ರಸ್ತಾಪಿಸುತ್ತೇನೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಿಲ್ಲ’ ಎಂದು ಹೇಳಿದರು.
ನೋಟು ರದ್ದು ಕ್ರಮವನ್ನು ಟೀಕಿಸಿದ ರಾಹುಲ್, ಮೋದಿ ಅವರ ಕೆಲವೇ ಕೆಲವು ಮಿತ್ರರಿಗೆ ಇದರಿಂದ ಲಾಭವಾಗಿದೆ ಎಂದು ಆರೋಪಿಸಿದರು.ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧವೂ ಬಿರುನುಡಿಗಳನ್ನಾಡಿದರು.
‘ರಮಣ್ ಸಿಂಗ್15ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರು ಕೇಂದ್ರದಲ್ಲಿ ನಾಲ್ಕೂವರೆ ವರ್ಷ ಅಧಿಕಾರ ಪೂರೈಸಿದ್ದಾರೆ. ಆದರೆ, ಯುವಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ನೀಡಿದ್ದ ಭರವಸೆಗಳನ್ನು ಪೂರೈಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ.
ಈ ಬಾರಿ ಛತ್ತೀಸ್ಗಢದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕೇವಲ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು.
ಛತ್ತೀಸ್ಗಢ ವಿಧಾನಸಭೆಯು90 ಸದಸ್ಯ ಬಲವನ್ನು ಹೊಂದಿದೆ. ಚುನಾವಣಾ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ 18 ಸ್ಥಾನಗಳಿಗೆ ನವೆಂಬರ್ 12 ರಂದುಮತದಾನ ನಡೆದಿದೆ. ಉಳಿದ 72 ಸ್ಥಾನಗಳಿಗೆ ನವೆಂಬರ್ 20 ರಂದುಎರಡನೇ ಹಂತದ ಮತದಾನ ನಡೆಯಲಿದೆ.
ಫಲಿತಾಂಶ ಡಿಸೆಂಬರ್ 11 ರಂದು ಪ್ರಕಟವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.