ನವದೆಹಲಿ, ಬೆಂಗಳೂರು:ಕೆಲ ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ ಚುರುಕು ಪಡೆದ ಕಾರಣ ಶೇ 35ರಷ್ಟಿದ್ದ ಮಳೆ ಕೊರತೆ ಪ್ರಮಾಣ ಶೇ 18ಕ್ಕೆ ತಗ್ಗಿದೆ. ಮುಂಗಾರು ಮಾರುತಗಳು ದೇಶವ್ಯಾಪಿ ಆವರಿಸಿವೆ. ದೇಶದಲ್ಲಿ ಶೇ 33ರಷ್ಟು ಇದ್ದ ಮಳೆ ಕೊರತೆ ಪ್ರಮಾಣ ಶೇ 21ಕ್ಕೆ ಇಳಿಕೆಯಾಗಿದ್ದು, ದೆಹಲಿ ಮತ್ತು ದೇಶದ ಮಧ್ಯಭಾಗಗಳಲ್ಲಿ ಮಳೆಯಾಗಿದೆ.
ಮಾರುತಗಳ ಪಯಣ
ಮುಂಗಾರು ಮಾರುತಗಳು ಸದ್ಯ ಬಾರ್ಮೇರ್, ಜೋಧಪುರ, ಸಿಕಾರ್, ರೋಹ್ಟಕ್, ಚಂಡಿಗಡ, ಊನಾ ಮತ್ತು ಅಮೃತಸರದತ್ತ ಸಾಗುತ್ತಿವೆ. ಮುಂದಿನ 48 ಗಂಟೆಗಳಲ್ಲಿ ಹರಿಯಾಣ, ಪಂಜಾಬ್, ರಾಜಸ್ಥಾನದ ಉಳಿದ ಭಾಗಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಕೊರತೆ, ಬಿತ್ತನೆ ಇಳಿಕೆ
ಜೂನ್ನಲ್ಲಿ ಮುಂಗಾರು ಕೊರತೆಯಿಂದಾಗಿ ಆಹಾರ ಧಾನ್ಯಗಳ ಬಿತ್ತನೆ ಪ್ರಮಾಣ ಶೇ 27ರಷ್ಟು ಕಡಿಮೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಒಟ್ಟಾರೆ 234.33 ಲಕ್ಷ ಹೆಕ್ಟೇರ್ಗಳಲ್ಲಿ ಬಿತ್ತನೆ ಕಾರ್ಯ ನಡೆದಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ಜುಲೈ ಮತ್ತು ಆಗಸ್ಟ್ನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಮುಂಗಾರು ಹಂಗಾಮಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ (ಎಂಎಸ್ಪಿ) ಘೋಷಿಸಲಾಗಿದೆ. ಹೀಗಾಗಿ ಬಿತ್ತನೆ ಕಾರ್ಯ ಚುರುಕಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಭತ್ತ ಬಿತ್ತನೆ ಇಳಿಕೆ
ಕರ್ನಾಟಕ, ಛತ್ತೀಸಗಡ, ಉತ್ತರ ಪ್ರದೇಶ, ಹರಿಯಾಣ, ಒಡಿಶಾ, ಮಧ್ಯಪ್ರದೇಶ, ಅಸ್ಸಾಂ, ಅರುಣಾಚಲಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ
ಬೇಳೆಕಾಳು ಬಿತ್ತನೆ ಇಳಿಕೆ
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡು
ಮಳೆ ಕೊರತೆ ಎಲ್ಲೆಲ್ಲಿ?
* ಹವಾಮಾನ ಇಲಾಖೆಯ 26 ಉಪವಿಭಾಗಗಳಲ್ಲಿ ಮಳೆ ಕೊರತೆ
* ದಕ್ಷಿಣ ಭಾರತದ 10ರ ಪೈಕಿ 7 ಉಪವಿಭಾಗದಲ್ಲಿ ಮಳೆಯ ಕೊರತೆ
* ಕಳೆದ ವಾರದಿಂದ ಮಧ್ಯ ಭಾರತದಲ್ಲಿ ಉತ್ತಮ ಮಳೆ ಸುರಿದಿದೆ
* ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ನಲ್ಲಿ ಮಳೆ ಕೊರತೆ
* ಉತ್ತರ ಭಾರತದ 9ರ ಪೈಕಿ 7 ಉಪವಿಭಾಗಗಳಲ್ಲಿ ಮಳೆ ಕಡಿಮೆ
* ಪೂರ್ವ ರಾಜಸ್ಥಾನದ ಉಪವಿಭಾಗದಲ್ಲಿ ಮಾತ್ರ ಅತಿಹೆಚ್ಚು ಮಳೆ
* ಮಧ್ಯಪ್ರದೇಶದ ಪೂರ್ವ ಭಾಗದಲ್ಲಿ ಅತಿಹೆಚ್ಚು ಮಳೆ
* ಕಚ್, ಸೌರಾಷ್ಟ್ರ, ಮರಾಠವಾಡ, ವಿದರ್ಭ ಸೇರಿ ಮಧ್ಯಭಾರತದಲ್ಲಿ ಮುಂಗಾರು ದುರ್ಬಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.