ಚೆನ್ನೈ: ‘ತಮಿಳುನಾಡಿನ ಹಿತಾಸಕ್ತಿಗೋಸ್ಕರ ರಾಜಕೀಯದಲ್ಲಿ ಜೊತೆಯಾಗಿ ಕೆಲಸ ಮಾಡಲು ಯಾವುದೆ ಅಡ್ಡಿ ಇಲ್ಲ’ ಎಂದು ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ನಟ, ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.
‘ನಾವಿಬ್ಬರೂ ಜತೆಯಾದರೆ ಅದು ಅಚ್ಚರಿಯೇನಲ್ಲ. ಇಬ್ಬರೂ 44 ವರ್ಷಗಳಿಂದ ಜತೆಯಲ್ಲಿದ್ದೇವೆ. ಒಂದಾಗುವ ಅನಿವಾರ್ಯತೆ ಬಂದರೆ ನಿಮಗೆ ತಿಳಿಸುತ್ತೇನೆ. ಈ ಎಲ್ಲವನ್ನೂ ಚರ್ಚಿಸುವ ಸಮಯ ಇದಲ್ಲ. ಕೆಲಸ ಮುಖ್ಯ’ ಎಂದು ಕಮಲ್ಹಾಸನ್ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕಮಲ್ ಹೇಳಿಕೆ ನೀಡಿದ ಒಂದು ಗಂಟೆಯ ಬಳಿಕ ರಜನಿಕಾಂತ್ ಕೂಡಾ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ‘ಸಂದರ್ಭ ಕೂಡಿಬಂದರೆ, ಕಮಲ್ ಮತ್ತು ನಾನು ರಾಜ್ಯದ ಶ್ರೇಯೋಭಿವೃದ್ಧಿಗೋಸ್ಕರ ಒಂದಾಗುತ್ತೇವೆ’ ಎಂದಿದ್ದಾರೆ.