ಚೆನ್ನೈ:‘ಚಿತ್ರನಟ ರಜನಿಕಾಂತ್ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಅಲ್ಲದೆ, ಕೋಮುಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ’ ಎಂದು ಡಿಎಂಕೆ ಶುಕ್ರವಾರ ಆರೋಪಿಸಿದೆ.
ತನ್ನ ಮುಖವಾಣಿ ‘ಮುರಸೋಳಿ’ಯಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿರುವ ಡಿಎಂಕೆ, ತಮ್ಮ ನೂತನ ರಾಜಕೀಯ ಪಕ್ಷ ರಜನಿ ಮಕ್ಕಳ ಮಂದ್ರಂ (ಆರ್ಎಂಎಂ) ಬಗ್ಗೆ ರಜನಿಕಾಂತ್ ನೀಡಿರುವ ಹೇಳಿಕೆಯ ಕುರಿತು ಟೀಕಿಸಿದೆ. ‘ಮುಗ್ದ ಅಭಿಮಾನಿ’ ಹೆಸರಿನಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ಲೇಖನ ಪ್ರಕಟಿಸಿದೆ.
‘ಪಕ್ಷದಲ್ಲಿನ ಹುದ್ದೆಗಳಿಗಾಗಿ ಹಣದ ಆಮಿಷ ಒಡ್ಡುವವರಿಗೆ ಅವಕಾಶವಿಲ್ಲ’ ಎಂದು ಮಂಗಳವಾರ ರಜನಿಕಾಂತ್ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದ ಮಾತನ್ನು ಉಲ್ಲೇಖಿಸಿದೆ.
‘ಕೋಮು ಶಕ್ತಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಇಂತಹ ಷರತ್ತುಗಳನ್ನು ವಿಧಿಸುತ್ತಿದ್ದಾರೆ’ ಎಂದು ಅದು ಟೀಕಿಸಿದೆ.
‘ನಾನು ಸತ್ಯವನ್ನೇ ಹೇಳಿದ್ದೇನೆ. ರಾಜಕೀಯದಲ್ಲಿ ಪಾರದರ್ಶಕತೆ ತರುವುದು ನನ್ನ ಉದ್ದೇಶ. ಯಾವುದೇ ಶಕ್ತಿಯು ನನ್ನ ಮತ್ತು ನನ್ನ ಅಭಿಮಾನಿಗಳನ್ನು ಪ್ರತ್ಯೇಕಿಸಲಾರದು’ ಎಂದು ರಜನಿ ಹೇಳಿದ್ದಾರೆ.