ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ

ಜೈಪುರ: ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿದೆ. ಗುಂಪು ಹಲ್ಲೆ ಪ್ರಕರಣದಲ್ಲಿ ಸಂತ್ರಸ್ತರು ಸಾವಿಗೀಡಾದರೆ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷದವರಗೆ ದಂಡ ವಿಧಿಸಬೇಕು ಎಂದು ಈ ಮಸೂದೆಯಲ್ಲಿದೆ.
ಜುಲೈ 30ರಂದು ಕಾನೂನು ಸಚಿವ ಶಾಂತಿ ಧರಿವಾಲ್ ಅವರು ಗುಂಪು ಹಲ್ಲೆಯಿಂದ ರಕ್ಷಣೆ ಮಾಡುವ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಆಗಸ್ಟ್ 5 ಸೋಮವಾರ ಈ ಮಸೂದೆ ಬಗ್ಗೆ ಚರ್ಚೆ ನಡೆದು ಅನುಮೋದನೆ ಲಭಿಸಿದೆ.
ಕಾಂಗ್ರೆಸ್ ಆಡಳಿತವಿರುವ ಮಧ್ಯಪ್ರದೇಶದ ನಂತರ ಗುಂಪು ಹಲ್ಲೆ ತಡೆ ಮಸೂದೆಗೆ ಅನುಮೋದನೆ ನೀಡಿದ ಎರಡನೇ ರಾಜ್ಯವಾಗಿದೆ ರಾಜಸ್ಥಾನ. ಈ ಕಾನೂನಿನ ಪ್ರಕಾರ ಗುಂಪು ಹಲ್ಲೆ ಪ್ರಕರಣಗಳು ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಸಲಿದ್ದು, ಇದು ಜಾಮೀನು ರಹಿತ ಮತ್ತು ಸಂಯುಕ್ತ ಅಪರಾಧವಾಗಿರುವುದಿಲ್ಲ.
ಹೊಸ ಕಾನೂನಿನಲ್ಲಿ ಏನಿರುತ್ತದೆ?
ಗುಂಪು ಹಲ್ಲೆ ಸಂತ್ರಸ್ತೆ/ಸಂತ್ರಸ್ತ ಸಾವಿಗೀಡಾದರೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ₹1 ಲಕ್ಷದಿಂದ ₹5 ಲಕ್ಷದ ವರೆಗೆ ದಂಡ ವಿಧಿಸಲಾಗುವುದು. ಒಂದು ವೇಳೆ ಸಂತ್ರಸ್ತ/ಸಂತ್ರಸ್ತೆಗೆ ಗಂಭೀರ ಗಾಯಗಳಾಗಿದ್ದರೆ ಅಪರಾಧಿಗೆ 10 ವರ್ಷ ಜೈಲು ಮತ್ತು ₹25,000- ₹3 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಇನ್ನುಳಿದಂತೆ ಸಂತ್ರಸ್ತರಿಗೆ ಗಾಯಗಳಾಗಿದ್ದರೆ ಅಪರಾಧಿಗೆ 7 ವರ್ಷ ಜೈಲು ಮತ್ತು ₹1 ಲಕ್ಷದವರಗೆ ದಂಡ ವಿಧಿಸಲಾಗುವುದು.
ಆರೋಪಿಯ ಬಂಧನಕ್ಕೆ ತಡೆಯೊಡ್ಡುವುದು, ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವುದು ಅಥವಾ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದರೆ ಅಪರಾಧಿಗೆ 5 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಲಾಗುವುದು.
ಗುಂಪು ಹಲ್ಲೆ ಪ್ರಕರಣದಲ್ಲಿ ಸಾಕ್ಷಿದಾರರ ಭದ್ರತೆಗಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಕೋಆರ್ಡಿನೇಟರ್ ಒಬ್ಬರನ್ನು ನಿಯೋಜಿಸಲಾಗುವುದು. ಪೊಲೀಸ್ ಇನ್ಸ್ಪೆಕ್ಟರ್ ಶ್ರೇಣಿಗಿಂತ ಕೆಳಗಿನ ಶ್ರೇಣಿಯ ಯಾವುದೇ ಅಧಿಕಾರಿ ಈ ಪ್ರಕರಣಗಳ ತನಿಖೆ ನಡೆಸುವಂತಿಲ್ಲ.
ಸಂತ್ರಸ್ತರಿಗೆ ರಾಜಸ್ಥಾನ ಸಂತ್ರಸ್ತರ ಪರಿಹಾರ ಯೋಜನೆಯಿಂದ ಪರಿಹಾರ ಧನ ಲಭಿಸಲಿದ್ದು, ಪುನರ್ವಸತಿ ಅಗತ್ಯವಿದ್ದರೆ ಅದನ್ನೂ ಕಲ್ಪಿಸಲಾಗುವುದು.
ಬಿಜೆಪಿ ಪ್ರತಿಕ್ರಿಯೆ ಏನು?
ಒಂದು ನಿರ್ದಿಷ್ಟ ಸಮುದಾಯವನ್ನು ಮೆಚ್ಚಿಸುವುದಕ್ಕಾಗಿ ಸರ್ಕಾರ ಈ ರೀತಿಯ ಕಾನೂನನ್ನು ಜಾರಿಗೆ ತಂದಿರುವುದು ದುರದೃಷ್ಟಕರ ಎಂದು ಬಿಜೆಪಿ ವಕ್ತಾರ ಪಂಕಜ್ ಮೀನಾ ಹೇಳಿದ್ದಾರೆ.
ಇದನ್ನೂ ಓದಿ: ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.