ಚೆನ್ನೈ: ತಮಿಳು ಸೂಪರ್ ಸ್ಟಾರ್ ಮತ್ತು ರಾಜಕಾರಣಿ ರಜನಿಕಾಂತ್ ಅವರು ಬಿಜೆಪಿಯ ಪ್ರಣಾಳಿಕೆಯನ್ನು ಹೊಗಳಿದ್ದಾರೆ. ನದಿಗಳ ಜೋಡಣೆ ಭರವಸೆಯು ಜಾರಿಯಾದರೆ ದೇಶದ ಬಡತನ ಅರ್ಧದಷ್ಟು ನೀಗಲಿದೆ ಎಂದು ಅವರು ಹೇಳಿದ್ದಾರೆ.
ಎಐಎಡಿಎಂಕೆ–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡಿದ ದಿನವೇ ಈ ಹೊಗಳಿಕೆ ಬಂದಿದೆ. ಬಿಜೆಪಿಗೆ ಬೆಂಬಲ ನೀಡಿ ಎಂದು ಅವರು ಸ್ಪಷ್ಟವಾಗಿ ಹೇಳಿಲ್ಲ. ಹಾಗಿದ್ದರೂ ಪ್ರಣಾಳಿಕೆಯನ್ನು ಹೊಗಳಿದ ಅವರ ಕ್ರಮ ಬಿಜೆಪಿಗೆ ಬೆಂಬಲ ಕೊಟ್ಟಂತೆಯೇ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಫೆ. 17ರಂದು ರಜನಿಕಾಂತ್ ಹೇಳಿದ್ದರು. ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದು ಮಾತ್ರವಲ್ಲದೆ, ರಜನಿ ಮಕ್ಕಳ್ ಮಂದ್ರಮ್ನ ಹೆಸರು ಮತ್ತು ಧ್ವಜವನ್ನು ಯಾರೂ ಬಳಸುವಂತಿಲ್ಲ ಎಂದೂ ಹೇಳಿದ್ದರು.
ನೀರು ಅತ್ಯಂತ ಮುಖ್ಯ ವಿಚಾರವಾಗಿದ್ದು, ನೀರಿನ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಇರುವವರನ್ನು ತಮ್ಮ ಅಭಿಮಾನಿಗಳು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದ್ದರು.