ನವದೆಹಲಿ (ಪಿಟಿಐ): ದೂರದರ್ಶನದಲ್ಲಿ 80ರ ದಶಕದಲ್ಲಿ ಪ್ರಸಾರವಾಗುತ್ತಿದ್ದ, ಜನಪ್ರಿಯ ಧಾರಾವಾಹಿ ‘ರಾಮಾಯಣ’ ಮಾ. 28ರಿಂದ ಮರುಪ್ರಸಾರವಾಗಲಿದೆ.
ಕೋವಿಡ್ನಿಂದಾಗಿ 21 ದಿನ ದೇಶದಾದ್ಯಂತ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ, ಪೌರಾಣಿಕ ಧಾರಾವಾಹಿಗಳಾದ ರಾಮಾಯಣ ಮತ್ತು ಮಹಾಭಾರತ ಮರುಪ್ರಸಾರವಾಗಬೇಕು. ಇದರಿಂದ ಲಾಕ್ಡೌನ್ ಅವಧಿಯಲ್ಲಿ ವೀಕ್ಷಣೆಗೆ ಅನುಕೂಲವಾಗುವುದು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಬೇಡಿಕೆ ಮುಂದಿಟ್ಟಿದ್ದರು.
‘ಜನರ ಬೇಡಿಕೆಯಂತೆ ಶನಿವಾರದಿಂದ ರಾಮಾಯಣ ಧಾರಾವಾಹಿ ಮರುಪ್ರಸಾರ ಆರಂಭವಾಗುವುದು. ಬೆಳಿಗ್ಗೆ 9ರಿಂದ 10 ಹಾಗೂ ರಾತ್ರಿ 9ರಿಂದ 10ರ ವರೆಗೆ ತಲಾ ಒಂದು ಸಂಚಿಕೆ ಪ್ರಸಾರ ಮಾಡಲಾಗುವುದು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
‘ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಇದ್ದರೂ, ಈ ಧಾರಾವಾಹಿಯ ಮರುಪ್ರಸಾರಕ್ಕಾಗಿ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ’ ಎಂದು ಪ್ರಸಾರ ಭಾರತಿ ಸಿಇಒ ಶಶಿಶೇಖರ್ ಹೇಳಿದ್ದಾರೆ.
ರಮಾನಂದ ಸಾಗರ್ ನಿರ್ದೇಶಿಸಿದ ‘ರಾಮಾಯಣ’ ಧಾರಾವಾಹಿ ಪ್ರಸಾರ 1987ರಲ್ಲಿ ಆರಂಭವಾಗಿತ್ತಲ್ಲದೇ, ದೇಶದಾದ್ಯಂತ ಮನೆಮಾತಾಗಿತ್ತು.