ನವದೆಹಲಿ: ಹೈದರಾಬಾದ್ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಹಿನ್ನೆಲೆಯಲ್ಲಿ ‘ಅತ್ಯಾಚಾರಿಗಳನ್ನು ಶಾಶ್ವತವಾಗಿ ಜೈಲಿನಲ್ಲಿರಿಸಬೇಕು’ ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ಮಂಗಳವಾರ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಮಾತನಾಡಿ, ‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು’ ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ, ಹೇಮಾ ಪ್ರತಿಕ್ರಿಯಿಸಿದ್ದಾರೆ.
‘ಮಹಿಳೆಯರಿಗೆ ಕಿರುಕುಳವಾಗುವುದನ್ನು ನಿತ್ಯವೂ ಕೇಳುತ್ತಿದ್ದೇವೆ. ಹಾಗಾಗಿ, ಅಪರಾಧಿಗಳನ್ನು ಶಾಶ್ವತವಾಗಿ ಜೈಲಿನಲ್ಲಿರಿಸಬೇಕೆಂಬುದು ನನ್ನ ಸಲಹೆ’ ಎಂದು ಹೇಮಾಮಾಲಿನಿ, ಸಂಸತ್ ಅವರಣದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಮಾತನಾಡಿದರು.
15 ಲಕ್ಷ ಮಂದಿ ಸಹಿ:ಪಶುವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ‘ಚೇಂಜ್.ಒಆರ್ಜಿ’ (change.org)ನಡೆಸಿದ ಆನ್ಲೈನ್ ಅಭಿಯಾನಕ್ಕೆ 15 ಲಕ್ಷ ಮಂದಿ ಸಹಿ ಹಾಕಿದ್ದಾರೆ.
ಸಂಸ್ಥೆಯು ನ.29ರಿಂದ ಅಭಿಯಾನ ಆರಂಭಿಸಿತ್ತು. 24 ಗಂಟೆಗಳಲ್ಲಿಯೇ 3 ಲಕ್ಷ ಮಂದಿ ಸಹಿ ಹಾಕಿ ಘಟನೆಯನ್ನು ಖಂಡಿಸಿದ್ದರು. ನಾಲ್ಕು ದಿನಗಳಲ್ಲಿ 15 ಲಕ್ಷ ಮಂದಿ ಸಹಿ ಹಾಕಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.