ಕೋಲ್ಕತ್ತ : 2017ರ ನವೆಂಬರ್ 14ರಂದು ಸಿಹಿಖಾದ್ಯ ‘ರಸಗುಲ್ಲಾ’ಗೆ ಭೌಗೋಳಿಕ ಸೂಚಿ (ಜಿಐ) ದೊರೆತ ಹಿನ್ನೆಲೆಯಲ್ಲಿಪಶ್ಚಿಮ ಬಂಗಾಳದಲ್ಲಿ ‘ರಸಗುಲ್ಲಾ ದಿನ’ವನ್ನು ಗುರುವಾರ ಆಚರಿಸಲಾಯಿತು.
ಉತ್ತರ ಕೋಲ್ಕತ್ತದಾ ಬಾಗ್ಬಜಾರ್ನ ಬಾಣಸಿಗ ನವೀನ್ ಚಂದ್ರ ದಾಸ್ ಎಂಬುವರು ಬಂಗಾಳಿ ರಸಗುಲ್ಲಾವನ್ನು ಮೊದಲು ತಯಾರಿಸಿದರು. ಇವರ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಲಾಗಿದ್ದು, ಗುರುವಾರ ಸಚಿವೆ ಶಶಿ ಪಂಜಾ ಮಾಲಾರ್ಪಣೆ ಮಾಡಿದರು ಎಂದು ನವೀನ್ ಚಂದ್ರ ದಾಸ್ ಅವರ ವಂಶಜ ಧಿಮನ್ ದಾಸ್ ತಿಳಿಸಿದರು.
ಮಕ್ಕಳಿಗೆ ರಸಗುಲ್ಲಾ ಹಂಚಿ ಧಿಮನ್ ದಾಸ್ ಕುಟುಂಬ ಸಂಭ್ರಮ ಪಟ್ಟಿತು. ರಾಜ್ಯದ ಎಲ್ಲ ಸಿಹಿಖಾದ್ಯಗಳ ಅಂಗಡಿಗಳು ಈ ದಿನವನ್ನು ರಸಗುಲ್ಲಾ ದಿನವಾಗಿ ಆಚರಿಸುತ್ತಿವೆ.
ರಸಗುಲ್ಲಾಗೆ ಭೌಗೋಳಿಕ ಸೂಚಿ ಪಡೆಯಲು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ನಡುವೆ ಪೈಪೋಟಿ ನಡೆದಿತ್ತು. ರಸಗುಲ್ಲಾ ತನ್ನ ರಾಜ್ಯದ್ದೆಂದು ಎರಡೂ ರಾಜ್ಯಗಳು ವಾದಿಸಿದ್ದವು. ಇದೀಗ ಒಡಿಶಾ ಕೂಡ ‘ಒಡಿಶಾ ರಸಗುಲ್ಲಾ’ ಹೆಸರಿನಲ್ಲಿ ಭೌಗೋಳಿಕ ಸೂಚಿಯನ್ನು ಪಡೆದಿದೆ. ಬಂಗಾಳದ ರಸಗುಲ್ಲಾವನ್ನು ಬಂಗಾಲರ್ ರಸಗುಲ್ಲಾ ಎಂದು ಕರೆಯಲಾಗಿದೆ.