ನವದೆಹಲಿ: ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರಿಗೆ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಂಪರು ಪರೀಕ್ಷೆ ನಡೆಸಲು ಅವಕಾಶ ಕೊಡಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಅರ್ಜಿ ಸಲ್ಲಿಸಿದೆ.
ಕಾರ್ತಿ ತನಿಖೆಗೆ ಸಹಕರಿಸುತ್ತಿಲ್ಲ. ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದ್ದರೂ ಅವುಗಳ ಪಾಸ್ವರ್ಡ್ಗಳನ್ನು ಅವರು ನೀಡುತ್ತಿಲ್ಲ. ಯಾವುದೇ ಪ್ರಶ್ನೆ ಕೇಳಿದರೂ ‘ನನ್ನನ್ನು ರಾಜಕೀಯ ಬಲಿಪಶು ಮಾಡಲಾಗಿದೆ’ ಎನ್ನುತ್ತಾರೆ. ಹಾಗಾಗಿ ಮಂಪರು ಪರೀಕ್ಷೆ ನಡೆಸುವುದು ಅಗತ್ಯ ಎಂದು ಸಿಬಿಐ ವಾದಿಸಿದೆ.
ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಲಾಗುವುದು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುನಿಲ್ ರಾಣಾ ತಿಳಿಸಿದ್ದಾರೆ.
ಐಎನ್ಎಕ್ಸ್ ಮೀಡಿಯಾಕ್ಕೆ ವಿದೇಶಿ ಹೂಡಿಕೆ ಅನುಮತಿ ಕೊಡಿಸಲು ಕಾರ್ತಿ ಲಂಚ ಪಡೆದಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಕಳೆದ ಬುಧವಾರ ಬಂಧಿಸಲಾಗಿತ್ತು. ಮಂಗಳವಾರದ ವಿಚಾರಣೆಯಲ್ಲಿ ಕಾರ್ತಿಯವರ ಸಿಬಿಐ ಕಸ್ಟಡಿಯನ್ನು ಮೂರು ದಿನ ವಿಸ್ತರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.