ಇಸ್ಲಾಮಾಬಾದ್ : ಮುಂಬೈ ಭಯೋತ್ಪಾದನಾ ದಾಳಿಯ ಅಂತಿಮ ಹಂತದ ವಿಚಾರಣೆಗೆ ಭಾರತ ಸರ್ಕಾರದ ‘ಅಸಹಕಾರ ವರ್ತನೆ’ ಮತ್ತು ‘ಮೊಂಡುತನ’ ಅತೀವ ಅಡಚಣೆಯಾಗಿದೆ ಎಂದು ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂಬೈನಲ್ಲಿ 2008ರ ನವೆಂಬರ್ 26ರಂದು ಪಾಕಿಸ್ತಾನದ ಭಯೋತ್ಪಾದಕರೇ ದಾಳಿ ನಡೆಸಿದ್ದರು ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಹೇಳಿಕೆಗೆ ಪ್ರತಿಯಾಗಿ ಇವರು ಈ ಹೇಳಿಕೆ ನೀಡಿದ್ದಾರೆ.
‘ಪಾಕಿಸ್ತಾನದಲ್ಲಿ ಮುಂಬೈ ದಾಳಿ ಸಂಬಂಧಿ ಪ್ರಕರಣ ವಿಚಾರಣೆಯ ವಿಳಂಬ ಆಗುತ್ತಿರುವುದು ಪಾಕಿಸ್ತಾನದಿಂದ ಅಲ್ಲ. ಭಾರತದ ಅಸಹಕಾರ ಮತ್ತು ಮೊಂಡುತನದ ಪರಿಣಾಮ ವಿಳಂಬವಾಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಪ್ರಯತ್ನಗಳ ಹೊರತಾಗಿಯೂ, ಪಾಕಿಸ್ತಾನದ ನ್ಯಾಯಾಲಯ ರಚಿಸಿದ ತನಿಖಾ ಸಮಿತಿ ಮತ್ತು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ಯೊಂದಿಗೆ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಭಾರತ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.