ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಗಿಲು ಹಿಡಿದ ಟೆಕಿ!

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೃಷಿಯಿಂದ ಕೃಷಿಕರೇ ದೂರ ಸರಿಯುತ್ತಿರುವ ಈ ಕಾಲದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಸಾವಿರಾರು ರೂಪಾಯಿ ಸಂಬಳ ತರುತ್ತಿದ್ದ ಉದ್ಯೋಗ ಬಿಟ್ಟು ಕಾವೇರಿ ನದಿ ತೀರದಲ್ಲಿ ಜಮೀನು ಖರೀದಿಸಿ ಕೃಷಿ ಕಾಯಕಕ್ಕೆ ಇಳಿದಿದ್ದಾರೆ.

ಐಬಿಎಂ, ಇನ್ಫೋಸಿಸ್‌, ಮೈಕ್ರೋಲ್ಯಾಂಡ್‌ನಂಥ ಕಂಪನಿ ಗಳಲ್ಲಿ ಕೆಲಸ ಮಾಡಿರುವ ಚಂದ್ರಶೇಖರ್‌, ಶ್ರೀರಂಗಪಟ್ಟಣದ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ, ಕಾವೇರಿ ನದಿ ದಂಡೆಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಕೈಯಲ್ಲಿ ಗುದ್ದಲಿ, ಪಿಕಾಸಿ, ಹಾರೆ ಹಿಡಿದು ಕೆಲಸ ಮಾಡುತ್ತಾ ಮಣ್ಣಿನ ನಂಟು ಬೆಳೆಸಿಕೊಂಡಿರುವ ಅವರು, ಪಾಳು ಬಿದ್ದಿದ್ದ ಎರಡು ಎಕರೆ ಜಮೀನು ಖರೀದಿಸಿ ಹತ್ತಾರು ಬಗೆಯ ಬೆಳೆ ಬೆಳೆದು ಅನುಭವಿ ರೈತನಂತೆ ಕೃಷಿ ಮಾಡುತ್ತಿದ್ದಾರೆ. ತೆಕ್ಕಲು ಬಿದ್ದಿದ್ದ ಭೂಮಿ ಈಗ ಹಸಿರಿನಿಂದ ಕಂಗೊಳಿಸುತ್ತಿದೆ.

ಚಂದ್ರಶೇಖರ್‌ ಅವರ ತೋಟದಲ್ಲಿ 135 ತೆಂಗು, 700 ಸೀಬೆ, 80 ನಿಂಬೆ, 100 ತೇಗ, 100ಕ್ಕೂ ಹೆಚ್ಚು ಬಾಳೆ, 50 ನುಗ್ಗೆ, ಮಾವು, ಸಪೋಟ, ದಾಳಿಂಬೆ ಇತರ ಗಿಡಗಳಿವೆ. ಅಲಹಾಬಾದ್‌ ಸಫೇದ್‌ ಮತ್ತು ತೈವಾನ್‌ ಪಿಂಕ್‌ ತಳಿಯ ಸೀಬೆ ಗಿಡಗಳು ಈಗಾಗಲೇ ಫಲ ಕೊಡುತ್ತಿವೆ. ‘ಸಂಪೂರ್ಣ’ ಮತ್ತು ‘ಪುಷ್ಕಳ’ ತಳಿಯ ತೆಂಗಿನ ಗಿಡಗಳು ಹುಲುಸಾಗಿ ಬೆಳೆಯುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಫಲಕ್ಕೆ ಬರಲಿವೆ.

ತುಳಸಿ, ವೀಳ್ಯದೆಲೆ, ದಾಸವಾಳ, ಪಾರಿಜಾತ, ಗುಲಾಬಿ, ಕಾಕಡ, ಚೆಂಡು ಹೂವಿನ ಗಿಡಗಳು ಕೂಡ ಇಲ್ಲಿವೆ. ತಮ್ಮ ಎರಡು ಎಕರೆ ವಿಸ್ತೀರ್ಣದ ತೋಟಕ್ಕೆ ನೀರುಣಿಸಲು ಎರಡು ತೆರೆದ ಬಾವಿಗಳನ್ನು ತೋಡಿಸಿದ್ದಾರೆ. ಸುಮಾರು 20 ಅಡಿ ಆಳದ ಈ ಬಾವಿಗಳಿಗೆ ಮೋಟರ್‌ ಅಳವಡಿಸಿ ಅಲ್ಲಿಂದ ನೀರೆತ್ತಿ ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ಹಾಯಿಸುತ್ತಿದ್ದಾರೆ.

(ಸಾಫ್ಟ್‌ವೇರ್‌ ಉದ್ಯೋಗ ಬಿಟ್ಟು ಶ್ರೀರಂಗಪಟ್ಟಣ ತಾಲ್ಲೂಕು ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ಕೃಷಿ ಮಾಡುತ್ತಿರುವ ಮೈಸೂರಿನ ಚಂದ್ರಶೇಖರ್‌)

ಚಂದ್ರಶೇಖರ್‌ ಅವರು ಜೀವಾಮೃತ ಮತ್ತು ಬೀಜಾಮೃತ ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ. ನಾಟಿ ಹಸುವಿನ ಸಗಣಿ (ಗೋಮಯ) ಮತ್ತು ಗಂಜಲದ (ಗೋಮೂತ್ರ) ಸಾರವನ್ನಷ್ಟೇ ಗಿಡಗಳಿಗೆ ಕೊಡಲಾಗುತ್ತಿದೆ. ಸಾವಯವ ಗೊಬ್ಬರದ ತೊಟ್ಟಿ ನಿರ್ಮಿಸಿದ್ದು, ಅದರಿಂದ ಬರುವ ರಸವತ್ತಾದ ಸಾರವನ್ನು ಮತ್ತೊಂದು ತೊಟ್ಟಿಯಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರತಿದಿನ 500 ಲೀಟರ್‌ಗೂ ಹೆಚ್ಚು ಸಾವಯವ ಸಾರ ಸಂಗ್ರಹಿಸುತ್ತಿದ್ದು, ಅದನ್ನು ನಳಿಕೆಗಳ ಮೂಲಕ ಗಿಡಗಳಿಗೆ ಉಣಿಸಲಾಗುತ್ತಿದೆ. ಕೃಷಿ ತ್ಯಾಜ್ಯವನ್ನು ತೊಟ್ಟಿಯಲ್ಲಿ ವಾರಗಟ್ಟಲೆ ಕೊಳೆಯಲು ಬಿಟ್ಟು ಅದರಿಂದ ಸಿಗುವ ಸಾರವನ್ನು ಕೊಡುತ್ತಿರುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತಿವೆ.

ಆರಂಭದಲ್ಲಿ ಜೀವಾಮೃತವನ್ನು ಬೆಂಗಳೂರಿನ ಅಂಗಡಿಯೊಂದರಲ್ಲಿ ತರಿಸಿಕೊಳ್ಳುತ್ತಿದ್ದ ಚಂದ್ರಶೇಖರ್‌, ಸದ್ಯ ತಮ್ಮ ತೋಟದಲ್ಲೇ ಅದನ್ನು ತಯಾರಿಸಿಕೊಳ್ಳುತ್ತಿದ್ದಾರೆ. ಗೊಬ್ಬರ ತಯಾರಿಕೆಗಾಗಿಯೇ ಅವರು ಗುಜರಾತ್‌ ತಳಿಯ ಎರಡು ನಾಟಿ ಹಸುವಿನ ಕರುಗಳನ್ನು ತರಿಸಿದ್ದಾರೆ. ಗೊಬ್ಬರ ಸಿದ್ಧಪಡಿಸಲು ಪೂರಕವಾಗಲೆಂದು ಜಮೀನಿನ ಸುತ್ತಲೂ ಇರುವ ಬದುಗಳಲ್ಲಿ ಗ್ಲಿರಿಸೀಡಿಯಾ ಮರಗಳನ್ನು ಬೆಳೆಸಿದ್ದಾರೆ.

ಅಳಿದುಳಿದ ಸಗಣಿಯನ್ನು ಬಳಸಿ ಅದರಿಂದ ಗೋಬರ್‌ ಗ್ಯಾಸ್‌ ಉತ್ಪಾದಿಸಲಾಗುತ್ತಿದೆ. ತೋಟದಲ್ಲಿರುವ ಎಲ್ಲ ಬಗೆಯ ಗಿಡಗಳೂ ರೋಗಮುಕ್ತವಾಗಿವೆ. ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಸದೆಯೂ ಉತ್ತಮ ಬೆಳೆ ಬೆಳೆಯಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ತಂದೆಯ ಮಾರ್ಗದರ್ಶನ

ಚಂದ್ರಶೇಖರ್‌ ಅವರಿಗೆ ಅವರ ತಂದೆ ಕ್ಯಾಪ್ಟನ್‌ ಎಚ್‌.ಎನ್‌. ಕೃಷ್ಣಮೂರ್ತಿ ಅವರೇ ಮಾರ್ಗದರ್ಶಕರು. 24 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೃಷ್ಣಮೂರ್ತಿ, ತಮ್ಮ ಮಗನ ಕೃಷಿ ಕಾರ್ಯಕ್ಕೆ ಬೆನ್ನೆಲುಬಾಗಿದ್ದಾರೆ. ಅಂಡಮಾನ್‌, ಅಸ್ಸಾಂನ ಇಸ್ತಾಪುರ್‌, ಸಿಕಂದರಾಬಾದ್‌, ಜಮ್ಮು, ಪುಣೆ, ರಾಜಸ್ಥಾನಗಳಲ್ಲಿ ಲೆಫ್ಟಿನೆಂಟ್‌ ಆಗಿ ಸೇವೆ ಸಲ್ಲಿಸಿರುವ ಕೃಷ್ಣ ಮೂರ್ತಿ ತಾವು ವಿವಿಧೆಡೆ ಕಂಡ ಕೃಷಿ ವೈವಿಧ್ಯ ಮತ್ತು ಬೆಳೆಯ ಕ್ರಮದ ಕುರಿತು ತಮ್ಮ ಮಗನಿಗೆ ಸಲಹೆ ನೀಡುತ್ತಿದ್ದಾರೆ. ತಮ್ಮ ಕೃಷಿ ಚಟುವಟಿಕೆಗೆ ಆನ್‌ಲೈನ್‌ ಸಹಾಯವನ್ನೂ ಇವರು ಪಡೆಯುತ್ತಿದ್ದಾರೆ.

‘ಸಾಫ್ಟ್‌ವೇರ್‌ ಕೆಲಸದಿಂದ ನೆಮ್ಮದಿ ಕಳೆದುಹೋಗಿತ್ತು. ನಿದ್ದೆ ಮಾಡುವ ಸಮಯದಲ್ಲಿ ಕೆಲಸ, ಕೆಲಸದ ಸಮಯದಲ್ಲಿ ನಿದ್ದೆ ಮಾಡುತ್ತಿದ್ದ ನಾನು ಒತ್ತಡದಲ್ಲಿ ಬದುಕುತ್ತಿದ್ದೆ. ಅಮೆರಿಕ ದೇಶದ ಸಮಯಕ್ಕೆ ಇಲ್ಲಿ ಸಮಯ ಹೊಂದಿಸಿಕೊಂಡು ಕೆಲಸ ಮಾಡಬೇಕಿತ್ತು. ನನ್ನ ಪತ್ನಿಯೂ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರಿಂದ ಇಬ್ಬರ ನಡುವೆ ಸಂವಹನದ ಕೊರತೆ ಕಾಡುತ್ತಿತ್ತು.ಸಾಫ್ಟ್‌ವೇರ್‌ ಕಂಪನಿಗಳಲ್ಲಿ ದುಡಿದರೆ ಒಂದಷ್ಟು ಹಣ ಗಳಿಸಬಹುದು ಎಂಬುದು ನಿಜವಾದರೂ ಅದರಿಂದ ಸಂತೃಪ್ತ ಜೀವನ ನಡೆಸುವುದು ಕಷ್ಟಸಾಧ್ಯ ಎಂಬ ಸತ್ಯವನ್ನು ಒಂಬತ್ತು ವರ್ಷಗಳ ಸೇವೆಯಲ್ಲಿ ತಿಳಿದುಕೊಂಡಿದ್ದೇನೆ. ಹಾಗಾಗಿ ನೆಮ್ಮದಿಯ ಬದುಕಿಗಾಗಿ ಕೃಷಿ ಮಾಡಲು ಹೊರಟಿದ್ದು ಇದರಲ್ಲಿ ಯಶಸ್ವಿಯಾಗುತ್ತೇನೆ’ ಎಂದು ಚಂದ್ರಶೇಖರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಸಂಪರ್ಕಕ್ಕೆ: 9945517249.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT