ಠಾಣೆ: ಅಯೋಧ್ಯೆಯ ರಾಮ ಮಂದಿರ–ಬಾಬರಿ ಮಸೀದಿ ವಿವಾದ ಇತ್ಯರ್ಥಪಡಿಸಲು ಇಲ್ಲಿಯವರೆಗೆ ನ್ಯಾಯಾಲಯಗಳಿಗೆ ಸಾಧ್ಯವಾಗಿಲ್ಲ. ಈಗಾಗಲೇ ಸಾಕಷ್ಟು ಕಾಲಹರಣವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯಗಳತ್ತ ನೋಡುವ ಬದಲು ಸುಗ್ರೀವಾಜ್ಞೆ ಅಥವಾ ಕಾನೂನು ರೂಪಿಸುವಂತೆ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
‘ರಾಮ ಮಂದಿರ ನಿರ್ಮಾಣವು ರಾಜಕೀಯ ಅಥವಾ ಧಾರ್ಮಿಕ ವಿಷಯವಲ್ಲ. ಅದು ರಾಷ್ಟ್ರೀಯ ಹೆಮ್ಮೆಯ ಪ್ರತೀಕ’ ಎಂದು ಸಂಘದ ಜಂಟಿ ಕಾರ್ಯದರ್ಶಿ ಡಾ. ಮನಮೋಹನ್ ವೈದ್ಯ ಹೇಳಿದ್ದಾರೆ.
ಮುಂಬೈ ಹೊರವಲಯ ಭಾಯಂದರ್ ಉತ್ತಾನದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಆರ್ಎಸ್ಎಸ್ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ 1994ರ ಸುಪ್ರೀಂಕೋರ್ಟ್ ಮತ್ತು 2010ರ ಅಲಹಾಬಾದ್ ಹೈಕೋರ್ಟ್ ತೀರ್ಪು ಹಾಗೂ ಭಾರತೀಯ ಸರ್ವೇಕ್ಷಣಾ ಇಲಾಖೆ ವರದಿ ಮಂದಿರ ನಿರ್ಮಾಣದ ಪರವಾಗಿವೆ. ಇನ್ನು ವಿವಾದಿತ ಜಾಗ ವಶಪಡಿಸಿಕೊಂಡು ಮಂದಿರ ನಿರ್ಮಾಣ ಮಾಡುವುದೊಂದೇ ಬಾಕಿ ಎಂದರು.
ಒಂದು ವೇಳೆ ಅಯೋಧ್ಯೆಯ ವಿವಾದಿತ ಜಾಗದಲ್ಲಿ ಬಲವಂತದಿಂದ ಮಸೀದಿ ನಿರ್ಮಿಸಿ ಅಲ್ಲಿ ನಮಾಜ್ ಸಲ್ಲಿಸಿದರೆ ಅಲ್ಲಾಹು ಕೂಡ ಆ ಪ್ರಾರ್ಥನೆಯನ್ನು ‘ಕಬೂಲ್’ (ಒಪ್ಪು) ಮಾಡುವುದಿಲ್ಲ. ಮುಸ್ಲಿಮರು ಎಲ್ಲಿ ಬೇಕಾದರೂ ನಮಾಜ್ ಸಲ್ಲಿಸಬಹುದು ಎಂದು ವೈದ್ಯ ಹೇಳಿದರು.
2019ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಮಹತ್ವದ ಕಾರ್ಯಕಾರಿಣಿಯನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಶಿ ಸೇರಿದಂತೆ ದೇಶದ ವಿವಿಧೆಡೆಯಿಂದ ಆಗಮಿಸಿರುವ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.