ಜೈಪುರ: ‘ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್ಎಸ್ಎಸ್) ದೇಶ ಮತ್ತು ಜಗತ್ತನ್ನು ಬದಲಿಸಬಲ್ಲ ಚಳವಳಿ. ಸಂಘ ಇರದಿದ್ದರೆ ಹಿಂದೂಸ್ಥಾನವೇ ಇರುತ್ತಿರಲಿಲ್ಲ’ ಎಂದು ರಾಜಸ್ಥಾನದ ಬಿಜೆಪಿ ಘಟಕದ ನೂತನ ಅಧ್ಯಕ್ಷ ಸತೀಶ್ ಪೂನಿಯಾ ಭಾನುವಾರ ಪುನರುಚ್ಚರಿಸಿದರು.
ಆರ್ಎಸ್ಎಸ್ ಹಿನ್ನೆಲೆಯ ಪೂನಿಯಾ ಶನಿವಾರವಷ್ಟೇ ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು.
ಐತಿಹಾಸಿಕ ಸಂಗತಿಗಳನ್ನು ಹೆಚ್ಚು ಕಾಲ ಮರೆಮಾಚಲು ಸಾಧ್ಯವಿಲ್ಲ ಎಂದ ಅವರು, ದೇಶ ವಿಭಜನೆಯ ಹಿಂದೆ ಯಾರಿದ್ದರು? ಮೊಘಲರು ಮತ್ತು ಬ್ರಿಟಿಷರ ಜತೆ ಯಾರು ಹೊಂದಾಣಿಕೆ ಮಾಡಿಕೊಂಡಿದ್ದರು? ಎಂದು ಕಾಂಗ್ರೆಸ್ ಪಕ್ಷವನ್ನು ಹೆಸರಿಸದೆ ಟೀಕಿಸಿದರು.