ನವದೆಹಲಿ: ಗ್ರಾಮೀಣಾಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಪ್ರಕ್ರಿಯೆಗೆ ಚುರುಕು ನೀಡುವ ಸಲುವಾಗಿ ನೂತನ ಕೇಂದ್ರ ಕಚೇರಿ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಇತರ ವಿಭಾಗಗಳ ಹಾಗೂ ಸಂಘಟನೆಗಳ ಕಚೇರಿಗಳೂ ಇದೇ ಕೇಂದ್ರ ಕಚೇರಿಯಲ್ಲಿ ಇರಲಿವೆ. ಇಲ್ಲಿನ ಕಸ್ತೂರಬಾ ಗಾಂಧಿ ಮಾರ್ಗದಲ್ಲಿ ‘ಗ್ರಾಮೀಣ ವಿಕಾಸ ಭವನ’ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ಕೇಂದ್ರ ಕಚೇರಿ ಆವರಣದಲ್ಲಿ ಆರೋಗ್ಯ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ ಹಾಗೂ ಸಿಬ್ಬಂದಿಯ ಮಕ್ಕಳ ಪಾಲನಾ ಕೇಂದ್ರ (ಕ್ರೆಶ್) ಇರಲಿದೆ. ವಿವಿಧ ರಾಜ್ಯಗಳ ಆಹಾರ ಸಹ ಇಲ್ಲಿನ ಕ್ಯಾಂಟೀನ್ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
‘₹ 450 ಕೋಟಿ ವೆಚ್ಚದಲ್ಲಿ ಈ ಕಟ್ಟಡದ ನಿರ್ಮಾಣ ಕಾರ್ಯ 2021ರಲ್ಲಿ ಪೂರ್ಣಗೊಳಿಸಲಾಗುವುದು. ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಕಚೇರಿಗಳೂ ಇರಲಿವೆ. 9 ಮಹಡಿಗಳ ಕಟ್ಟಡದ ಗೋಡೆಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಗ್ರಾಮೀಣ ಜೀವನವನ್ನು ತೆರೆದಿಡಲಿವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.