ಶಬರಿಮಲೆ:ಶಬರಿ ಗಿರಿ ಏರಲು ಬಂದಿದ್ದ ಇಬ್ಬರು ಮಧ್ಯವಯಸ್ಕ ಮಹಿಳೆಯರನ್ನು ವಾಪಸ್ ಕಳಿಸಿರುವ ಪೊಲೀಸರು, ‘ಭಕ್ತರು ಪ್ರತಿಭಟನೆ ಮಾಡುವ ಸಾಧ್ಯತೆ ಇರುವುದರಿಂದ ನಿಮಗೆ ಭದ್ರತೆ ನೀಡುವುದು ಕಷ್ಟವಾಗುತ್ತದೆ’ ಎಂದು ಕಾರಣ ಹೇಳಿದ್ದಾರೆ.
ಕಣ್ಣೂರಿನ ರೇಷ್ಮಾ ನಿಶಾಂತ್ ಮತ್ತು ಶನೀಲಾ ಸಾಜೇಶ್ ಎಂಬುವರು ಶನಿವಾರ ಬೆಳಿಗ್ಗೆ 5ಗಂಟೆಗೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಲು ಯತ್ನಿಸಿದರು. ‘41 ದಿನಗಳ ವ್ರತ ಮಾಡಿದ್ದೇವೆ. ನಮಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ಕೊಡಬೇಕು’ ಎಂದು ಮಹಿಳೆಯರು ಮಾಡಿಕೊಂಡಿದ್ದ ಮನವಿಯನ್ನು ಪೊಲೀಸರು ಪುರಸ್ಕರಿಸಿಲ್ಲ.
ಇಬ್ಬರು ಮಹಿಳೆಯರನ್ನು ನಿಯಂತ್ರಣ ಕೊಠಡಿಗೆ ಕರೆದುಕೊಂಡ ಹೋದ ಪೊಲೀಸರು, ಭದ್ರತೆ ನೀಡುವುದು ಕಷ್ಟ ಎಂಬುದನ್ನು ಮನವರಿಕೆ ಮಾಡಿಕೊಟ್ಟ ನಂತರ ಮಹಿಳೆಯರು ಹಿಂದಿರುಗಿದ್ದಾರೆ.
ಇದೇ ಮಹಿಳೆಯರು ಜನವರಿ 16ರಂದೂ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು.
ಈ ಮಹಿಳೆಯರ ಜೊತೆಗೆ, ಆರು ಜನರ ತಂಡವೊಂದು ಬಂದಿತ್ತು. ‘ಈ ಮಹಿಳೆಯರಿಗೆ ದೇವರ ದರ್ಶನ ಮಾಡಿಸುವುದಾಗಿ ಕರೆದೊಯ್ದ ಪೊಲೀಸರು ನಂತರ ದೇಗುಲದೊಳಗೆ ಪ್ರವೇಶ ನೀಡದ ವಾಪಸ್ ಕಳಿಸುವ ಮೂಲಕ ಮೋಸ ಮಾಡಿದ್ದಾರೆ’ ಎಂದು ಈ ತಂಡ ಆರೋಪಿಸಿದೆ.