ತಿರುವನಂತಪುರ: 62 ದಿನಗಳ ಮಂಡಲ ಪೂಜೆ–ಮಕರ ಬೆಳಕು ವಾರ್ಷಿಕ ತೀರ್ಥಯಾತ್ರೆಗಾಗಿ ಶುಕ್ರವಾರ ಸಂಜೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲನ್ನು ತೆರೆಯಲಾಯಿತು.
ಸಂಜೆಯಿಂದ ದೇವಾಲಯದಲ್ಲಿ ಸಂಪ್ರದಾಯಿಕ ಪೂಜೆಗಳು ಆರಂಭವಾದವು. ರಾತ್ರಿಯವರೆಗೂ ವಿಶೇಷ ಪೂಜೆ ಸೇವೆಗಳ ನಡೆಯಲಿವೆ. ಇಂದು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ಇರುವುದಿಲ್ಲ. ಶನಿವಾರದಿಂದ ಭಕ್ತರು ದೇವರ ದರ್ಶನ ಮಾಡಬಹುದು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮೂರನೇ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಯಿತು.ಹಿಂದೆ ಎರಡು ಬಾರಿ ಬಾಗಿಲು ತೆರೆದಾಗಲೂ ದೇವಾಲಯ ಪ್ರವೇಶಿಸಲು ಕೆಲವು ಮಹಿಳೆಯರು ಪ್ರಯತ್ನಿಸಿದ್ದರು. ಆದರೆ, ಭಕ್ತರು ಮತ್ತು ಪ್ರತಿಭಟನಕಾರರ ಪ್ರತಿರೋಧದಿಂದಾಗಿ ಈವರೆಗೆ ದೇಗಲು ಪ್ರವೇಶಿಸಲು ಮಹಿಳೆಯರಿಗೆ ಸಾಧ್ಯವಾಗಿಲ್ಲ.
ಡಿಸೆಂಬರ್ 26ರವರೆಗೂ ದೇವಾಲಯ ತೆರೆದಿರುತ್ತದೆ. ಮತ್ತೆ ಮೂರು ದಿನ ದೇವಾಲಯವನ್ನು ಮುಚ್ಚಿಡಿಸೆಂಬರ್ 30ರಿಂದ 2019ರ ಜನವರಿ 20ರವರೆಗೆತೆರೆದಿರಲಿದೆ. ಈ ವೇಳೆ500ಕ್ಕೂ ಹೆಚ್ಚು ಮಹಿಳೆಯರು ದೇಗುಲ ಪ್ರವೇಶಕ್ಕೆ ಅನುಮತಿಗಾಗಿ ಅರ್ಜಿಹಾಕಿದ್ದಾರೆ.
ಈಗಾಗಲೇ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ದೇವಾಲಯ ಪ್ರವೇಶಕ್ಕಾಗಿಕೊಚ್ಚಿಗೆ ಬಂದಿದ್ದಾರೆ. ಅವರನ್ನು ತಡೆಯಲು ವಿಮಾನ ನಿಲ್ದಾಣದ ಸುತ್ತ ನೂರಾರು ಜನ ಭಕ್ತರು ಕಾದು ಕುಳಿತ್ತಿದ್ದಾರೆ.
ಮಕರ ಬೆಳಕು
ಮಕರ ಬೆಳಕು ಕಾಣುವ ಸಂದರ್ಭ ಶಬರಿಮಲೆಯ ಅತ್ಯಂತ ಮಹತ್ವದ ದಿನ. ಈ ಬಾರಿ 2019ರ ಜನವರಿ 14ರಂದು ಮಕರ ಬೆಳಕು ಕಾಣಿಸಲಿದೆ. ಶಬರಿಮಲೆಯ ಒಂಬತ್ತು ಸ್ಥಳಗಳಿಂದ ಮಕರ ಬೆಳಕು ನೋಡಬಹುದು. ಅಂದು ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ.