ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಕೇರಳ ಸರ್ಕಾರ ಅಯ್ಯಪ್ಪ ಭಕ್ತರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.
ಕಣ್ಣೂರಿನ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ಕೇರಳದಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿದೆ ಎಂದರು. ಬಿಜೆಪಿ, ಆರ್ಎಸ್ಎಸ್ ಸೇರಿದಂತೆ ಇತರೆ ಸಂಘಟನೆಗಳ 2000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಿಜೆಪಿ ಅಯ್ಯಪ್ಪ ಭಕ್ತರ ಪರವಾಗಿದೆ ಎಂದು ಹೇಳುವ ಮೂಲಕ ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಕ್ತರ ಭಾವನೆಗಳ ಮೇಲೆನಂಬಿಕೆ ಇಲ್ಲದ ಸರ್ಕಾರ ತೀರ್ಪಿನ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡುತ್ತಿದೆ, ಕಳೆದ ಎರಡು ದಿನಗಳಿಂದ ಭಕ್ತರನ್ನು ಸಾಮೂಹಿಕವಾಗಿ ಬಂಧಿಸುತ್ತಿರುವುದೇಇದಕ್ಕೆ ಸಾಕ್ಷಿ ಎಂದು ಅಮಿತ್ ಶಾ ಹೇಳಿದರು.
ಬಂಧನಕ್ಕೆ ಒಳಗಾಗಿರುವ ಕಾರ್ಯಕರ್ತರಿಗೆ ನಮ್ಮ ಬೆಂಬಲ ಇದೆ, ಅಯ್ಯಪ್ಪ ಭಕ್ತರ ಬಾವನೆಗಳನ್ನು ಬಿಜೆಪಿ ಗೌರವಿಸಲಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವುದರಿಂದ 10 ರಿಂದ 50 ವರ್ಷದ ಮಹಿಳೆಯರಿಗೆ ದೇವಾಲಯದಲ್ಲಿ ಪ್ರವೇಶ ಇಲ್ಲ ಎಂಬ ಪದ್ಧತಿ ನಡೆದುಕೊಂಡು ಬಂದಿದೆ ಎಂದರು.
ಭಾರತದ ಕೆಲವು ದೇವಾಲಯಗಳಲ್ಲಿ ಈಗಲೂ ಪ್ರತ್ಯೇಕವಾಗಿ ಮಹಿಳೆಯರು ಮತ್ತು ಪುರುಷರಿಗೆ ಪ್ರವೇಶ ಇಲ್ಲ, ಆದಾಗ್ಯೂ ಯಾರು ಕೂಡ ಬಲವಂತ ಪ್ರವೇಶ ಮಾಡುತ್ತಿಲ್ಲ ಎಂದರು.
ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಹೇಳುವ ಮೂಲಕ ಅಮಿತ್ ಶಾ ತಮ್ಮ ಭಾಷಣ ಮುಗಿಸಿದರು.
In Sabarimala, nation has seen a fight between dharma,belief & bhakti on the one side & an oppressive Kerala govt on the other. The LDF is using its power to suppress belief of Ayyappa devotees. But Mr Vijayan,I want to remind you that BJP stands firmly with the Ayyappa devotees. pic.twitter.com/zVkyyOeho1
— Amit Shah (@AmitShah) October 27, 2018
ಉದ್ಘಾಟನೆಗೂ ಮೊದಲೇ ಕಾಲಿಟ್ಟ ಅಧ್ಯಕ್ಷ
ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡುವ ಮೊದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಮಾನ ಶನಿವಾರ ನಿಲ್ದಾಣದಲ್ಲಿ ಇಳಿಯಿತು.
ಈ ವಿಮಾನ ನಿಲ್ದಾಣ ಡಿಸೆಂಬರ್ 9ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಆದರೆ, ಅದಕ್ಕೂ ಮೊದಲೇ ಶಾ ಈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಸಾಮಾಜಿಕ ಬದಲಾವಣೆಯ ಹರಿಕಾರ ನಾರಾಯಣ ಗುರು ಶಿವಗಿರಿಯಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ನಡೆಯುವ ‘ಮಹಾಸಮಾಧಿ ನವತಿ ಯತಿ ಪೂಜಾ ಸಮ್ಮೇಳನ’ ದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.