ಪಂಪಾ: ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿ ಬುಧವಾರ ಸಂಜೆ 5ಕ್ಕೆ ಶಬರಿಮಲೆ ದೇಗುಲದ ಬಾಗಿಲು ತೆರೆಯಲಾಯಿತು.
ಭಾರಿ ಪ್ರತಿಭಟನೆಯ ನಡುವೆಯೇ ದೇಗುಲದ ಬಾಗಿಲು ತೆರೆಯಲಾಗಿದೆ. ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನಾಳೆ ಶಬರಿಮಲೆ, ನಿಲಕ್ಕಲ್ ಮತ್ತು ಪಂಪಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಮಧ್ಯೆ, ಶಬರಿಮಲೆಗೆ ತೆರಳುತ್ತಿದ್ದ ಆಂಧ್ರ ಪ್ರದೇಶದ ಭಕ್ತೆಯೊಬ್ಬರನ್ನು ಪ್ರತಿಭಟನಾಕಾರರು ತಡೆದು ವಾಪಸ್ ಕಳುಹಿಸಿದ್ದಾರೆ. ಪಂಪಾ ಮತ್ತು ನಿಲಕ್ಕಲ್ನಲ್ಲಿ ಮಹಿಳಾ ಯಾತ್ರಿಕರು, ಪತ್ರಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಹಲವು ಸುದ್ದಿವಾಹಿನಿಗಳ ವಾಹನಗಳು, ಕ್ಯಾಮರಾ ಮತ್ತಿತರ ಪರಿಕರಗಳಿಗೆ ಹಾನಿಯಾಗಿದೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಭಕ್ತರಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶಬರಿಮಲೆ ದೇಗುಲದ ಮಾಜಿ ಮುಖ್ಯ ಅರ್ಚಕರ ಮೊಮ್ಮಗ ರಾಹುಲ್ ಈಶ್ವರ್ ಅವರನ್ನೂ ಬಂಧಿಸಲಾಗಿದೆ.