ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಹೊಕ್ಕವರಿಗೆ ರಕ್ಷಣೆ ಕೊಡಿ: ಸುಪ್ರೀಂ ಕೋರ್ಟ್‌

Last Updated 18 ಜನವರಿ 2019, 18:20 IST
ಅಕ್ಷರ ಗಾತ್ರ

ನವದೆಹಲಿ: ಜನವರಿ 2ರಂದು ಶಬರಿಮಲೆ ದೇಗುಲ ಪ್ರವೇಶಿಸಿದ 50 ವರ್ಷದೊಳಗಿನ ಕನಕದುರ್ಗಾ ಮತ್ತು ಬಿಂದು ಅವರಿಗೆ ದಿನದ 24 ತಾಸು ಭದ್ರತೆ ಒದಗಿಸಬೇಕು ಎಂದು ಕೇರಳ ಪೊಲೀಸರಿಗೆ ಸುಪ್ರೀಂ ನಿರ್ದೇಶನ ನೀಡಿದೆ.

ಇಬ್ಬರು ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಮಾತ್ರ ಪರಿಗಣಿಸಲಾಗುವುದು. ಹಾಗಾಗಿ, ರಕ್ಷಣೆ ಕೋರಿ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ಶಬರಿಮಲೆ ವಿಚಾರಕ್ಕೆ ಸಂಬಂಧಿಸಿ ಬಾಕಿ ಇರುವ ಅರ್ಜಿಗಳ ಜತೆಗೆ ಸೇರಿಸಲಾಗುವುದಿಲ್ಲ. ಅಷ್ಟೇ ಅಲ್ಲ, ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಬೇರೆ ಯಾವುದೇ ರೀತಿಯ ಅರ್ಜಿಗಳಿಗೆ ಅವಕಾಶ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ಋತುಸ್ರಾವದ ವಯಸ್ಸಿನ ಯಾವ ಮಹಿಳೆಯೂ ಶಬರಿಮಲೆ ದೇಗುಲಕ್ಕೆ ಈವರೆಗೆ ಪ್ರವೇಶಿಸಿಲ್ಲ ಎಂದು ವಕೀಲ ಮ್ಯಾಥ್ಯೂ ಜೆ. ನೆಡುಂಪಾರ ವಾದಿಸಿದ್ದಾರೆ. ಮಹಿಳೆಯರ ಪ್ರವೇಶಕ್ಕೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್‌ ತೀರ್ಪು ಮರುಪರಿಶೀಲನೆ ಕೋರಿರುವ ಅರ್ಜಿದಾರರ ಪರ ಮ್ಯಾಥ್ಯೂ ವಾದಿಸುತ್ತಿದ್ದಾರೆ.

ಶಬರಿಮಲೆಗೆ ಹೋಗುವ ಎಲ್ಲ ಮಹಿಳೆಯರಿಗೆ ಸಾಕಷ್ಟು ಭದ್ರತೆ ಕೊಡಬೇಕು ಮತ್ತು ಮಹಿಳೆಯರು ಪ್ರವೇಶಿಸಿದ ಬಳಿಕ ದೇಗುಲವನ್ನು ಶುದ್ಧೀಕರಿಸಬಾರದು ಎಂಬುದು ಸೇರಿ ಇತರ ಹಲವು ಕೋರಿಕೆಗಳನ್ನೂ ಕನಕದುರ್ಗಾ ಮತ್ತು ಬಿಂದು ಅವರು ಸುಪ್ರೀಂ ಕೋರ್ಟ್‌ ಮುಂದಿಟ್ಟಿದ್ದರು. ಬಾಕಿ ಇರುವ ಅರ್ಜಿಗಳ ಜತೆಗೆ ಈ ಇಬ್ಬರ ಅರ್ಜಿಯನ್ನೂ ಸೇರಿಸಿಕೊಳ್ಳಬೇಕು ಎಂದು ಅವರ ವಕೀಲರಾದ ಇಂದಿರಾ ಜೈಸಿಂಗ್‌ ವಾದಿಸಿದರು.

ಆದರೆ, ಇಂತಹ ಯಾವುದೇ ವಿಚಾರಗಳನ್ನು ಈಗ ಪರಿಶೀಲಿಸಲಾಗುವುದಿಲ್ಲ. ಕೇರಳ ಸರ್ಕಾರವು ಈ ಮಹಿಳೆಯರಿಗೆ ಈಗಾಗಲೇ ಭದ್ರತೆ ಒದಗಿಸಿದ್ದರೆ, ನ್ಯಾಯಾಲಯದ ಆದೇಶದ ಬಳಿಕ ಅದನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT