ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ಉಮಾಭಾರತಿ ಅವರನ್ನು ಭೋಪಾಲದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸೋಮವಾರ ಭೇಟಿ ಮಾಡಿದರು. ಅವರಿಬ್ಬರ ಈ ಭೇಟಿ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಮಧ್ಯಪ್ರದೇಶದ ಮಾಜಿ ಸಿಎಂ ಉಮಾಭಾರತಿ ಅವರು ಸದ್ಯ ಭೋಪಾಲ ಕ್ಷೇತ್ರದ ಸಂಸದರು. ಇನ್ನು ತಾವು ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಅವರು ಆರು ತಿಂಗಳ ಹಿಂದೆಯೇ ಘೋಷಿಸಿದ್ದರು. ಅದರಂತೆ ಈ ಬಾರಿಭೋಪಾದಿಂದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಪಕ್ಷಕಣಕ್ಕಿಳಿಸಿದೆ. ಪಕ್ಷದ ಈ ನಿರ್ಧಾರದಿಂದ ಉಮಾಭಾರತಿ ಅವರು ಮುನಿಸಿಕೊಂಡಿದ್ದಾರೆ ಎಂಬ ವಾದಗಳು ಕೇಳಿ ಬಂದಿದ್ದವು.
ಇದೇ ಹಿನ್ನೆಲೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇಂದು ಉಮಾ ಭಾರತಿ ಅವರ ನಿವಾಸಕ್ಕೇ ತೆರಳಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಕೆಲ ಹೊತ್ತಿನ ಬಳಿಕ ಪ್ರಜ್ಞಾ ಸಿಂಗ್ ಅವರು ಉಮಾಭಾರತಿ ನಿವಾಸದಿಂದ ನಿರ್ಗಮಿಸಿ ಹೊರಗೆ ಕಾರು ಏರಿ ಹೊರಟು ನಿಂತರು. ಆಗ ಮನೆಯಿಂದ ಹೊರ ಬಂದ ಉಮಾಭಾರತಿ ಕಾರಿನ ಬಳಿ ಬಂದು ಪ್ರಜ್ಞಾ ಸಿಂಗ್ ಅವರಿಗೆ ನಮಿಸಿದರು. ಆಗ ಪ್ರಜ್ಞಾ ಭಾವುಕರಾದರು. ಕಣ್ಣೀರುಗರೆದರು. ಉಮಾಭಾರತಿ ಅವರು ಪಜ್ಞಾ ಸಿಂಗ್ ಅವರನ್ನು ಸಂತೈಸಿದರು.
#WATCH Madhya Pradesh: Pragya Singh Thakur, BJP's LS candidate from Bhopal breaks down while meeting Union Minister and senior BJP leader Uma Bharti in Bhopal. pic.twitter.com/SqcvJPCfnZ
— ANI (@ANI) April 29, 2019
ನಂತರ ಮಾತನಾಡಿದ ಉಮಭಾರತಿ, ‘ಪ್ರಜ್ಞಾ ಸಿಂಗ್ ಅವರು ಧಾಮಿರ್ಕವಾಗಿ ಎತ್ತರದ ವ್ಯಕ್ತಿತ್ವ ಹೊಂದಿರುವವರು. ಅವರು ತ್ಯಾಗಿ,’ ಎಂದು ಬಣ್ಣಿಸಿದರು. ಅಲ್ಲದೆ, ಸಾಧ್ವಿ ಪ್ರಜ್ಞಾ ಸಿಂಗ್ಗೆ ಉಮಭಾರತಿ ಹೊಸದೊಂದು ಹೆಸರಿಟ್ಟು ಕರೆದರು. ‘ದೀದಿ ಮಾ’ ಎಂದು ಅವರನ್ನು ಕರೆದರು.ಅಲ್ಲದೆ, ಪಕ್ಷ ಅವರನ್ನು ಭೋಪಾಲ ಕ್ಷೇತ್ರದಿಂದ ಅಭ್ಯರ್ಥಿ ಮಾಡಿರುವ ವಿಚಾರದಲ್ಲಿ ತಮಗೇನೂ ಅಸಮಾಧಾನವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ತಮ್ಮನ್ನು ಅವರೊಂದಿಗೆ ಹೋಲಿಕೆ ಮಾಡದಂತೆಯೂ ಅವರು ಮನವಿ ಮಾಡಿದರು. ‘ಸಾಧ್ವಿ ಪ್ರಜ್ಞಾ ಸಿಂಗ್ ಅವರು ದೊಡ್ಡ ಸಂತರು. ನಾನು ಸಾಮಾನ್ಯಳು ಮತ್ತು ಮೂರ್ಖಳು,’ ಎಂದು ಅವರು ಹೇಳಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.