ಭೋಪಾಲ್: ತಮ್ಮ ಹೇಳಿಕೆಗಳ ಮೂಲಕ ದೇಶದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ 21 ಪ್ರಹರಗಳ (42 ಗಂಟೆ) ಕಾಲ ಮೌನ ಆಚರಣೆ ನಡೆಸುವುದಾಗಿ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಸೋಮವಾರ ಹೇಳಿದ್ದಾರೆ.
‘ಚುನಾವಣೆ ಮುಗಿದು ಈಗ ಧ್ಯಾನದ ಸಮಯ ಬಂದಿದೆ. ನನ್ನ ಮಾತುಗಳಿಂದ ದೇಶಭಕ್ತರಿಗೆ ನೋವಾಗಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಸಾರ್ವಜನಿಕ ಜೀವನದಲ್ಲಿರುವುದರಿಂದ ಪ್ರಾಯಶ್ಚಿತ್ತದ ರೂಪದಲ್ಲಿ 21 ಪ್ರಹರಗಳ ಕಾಲ ಮೌನ ಆಚರಿಸಿ, ಕಠೋರ ಧ್ಯಾನ ನಡೆಸುತ್ತೇನೆ’ ಎಂದು ಪ್ರಜ್ಞಾ ಟ್ವೀಟ್ ಮಾಡಿದ್ದಾರೆ.
‘ಗಾಂಧಿಯ ಹತ್ಯೆ ಮಾಡಿದ್ದ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಕರೆದಿರುವುದಕ್ಕಾಗಿ ಸಾಧ್ವಿಯನ್ನು ಎಂದಿಗೂ ಕ್ಷಮಿಸಲಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಕಾರಣಕ್ಕೆ ಸಾಧ್ವಿ ಅವರು ಪ್ರಾಯಶ್ಚಿತ್ತ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.