ಲಾಹೋರ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತದ ಸರಬ್ಜಿತ್ ಸಿಂಗ್ ಮೇಲೆ 2013ರಲ್ಲಿ ಕೋಟ್ ಲಖ್ಪತ್ ಜೈಲಿನಲ್ಲಿ ದಾಳಿ ನಡೆಸಿ ಕೊಲೆ ಮಾಡಿದ್ದ ಪ್ರಮುಖ ಇಬ್ಬರು ಶಂಕಿತ ಆರೋಪಿಗಳನ್ನು ಪಾಕಿಸ್ತಾನ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ.
ಸುಮಾರು ಐದು ವರ್ಷಗಳಿಂದ ವಿಚಾರಣೆಗೆ ಬಾಕಿ ಇದ್ದ ಈ ಪ್ರಕರಣದ ತೀರ್ಪನ್ನು ಲಾಹೋರ್ ಸೆಷನ್ಸ್ ನ್ಯಾಯಾಲಯ ಶನಿವಾರ ಪ್ರಕಟಿಸಿದೆ.
ನ್ಯಾಯಾಲಯದ ಅಧಿಕಾರಿಗಳ ಪ್ರಕಾರ, ಈ ಪ್ರಕರಣದ ಎಲ್ಲ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರಿಂದ ಲಾಹೋರ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೊಯಿನ್ ಖೋಖರ್ ಅವರು ಶಂಕಿತ ಆರೋಪಿಗಳಾದ ಅಮಿರ್ ತಂಬಾ ಮತ್ತು ಮುದಾಸ್ಸರ್ ಎಂಬುವವರನ್ನು ಖುಲಾಸೆಗೊಳಿಸಿದರು.
1990ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸರಬ್ಜಿತ್ ಸಿಂಗ್ಗೆ ಪಾಕಿಸ್ತಾನ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.