ನವದೆಹಲಿ: ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರ ಬಳಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಅರ್ಜಿ ಸಲ್ಲಿಸಿದ್ದ ‘ನ್ಯಾಯ ಭೂಮಿ’ ಸ್ವಯಂ ಸೇವಾ ಸಂಸ್ಥೆಯು, ‘ಇವಿಎಂ ದುರ್ಬಳಕೆಯಾಗುವ ಸಾಧ್ಯತೆ ಇದೆ’ ಎಂದಿತ್ತು. ಈ ವಾದವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ತಳ್ಳಿಹಾಕಿದೆ.
‘ಪ್ರತಿಯೊಂದು ಯಂತ್ರವೂ ಬಳಕೆ ಮತ್ತು ದುರ್ಬಳಕೆಯ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕುರಿತು ಸಂದೇಹಗಳು ಎಲ್ಲೆಡೆ ಇರುತ್ತವೆ’ ಎಂದೂ ನ್ಯಾಯಪೀಠ ಹೇಳಿದೆ.