ನವದೆಹಲಿ : ಸುಪ್ರೀಂಕೋರ್ಟ್ನ ಆರು ನ್ಯಾಯಾಧೀಶರಿಗೆ ಎಚ್1ಎನ್1 ಸೋಂಕು ತಗುಲಿದೆ. ಸೋಂಕು ಇತರರಿಗೆ ಹರಡುವುದನ್ನು ತಪ್ಪಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರು ಇತರ ನ್ಯಾಯಾಧೀಶರೊಂದಿಗೆ ಮಂಗಳವಾರ ಸಭೆ ನಡೆಸಿದರು.
ವಕೀಲರು ಹಾಗೂ ಸುಪ್ರೀಂಕೋರ್ಟ್ನ ಇತರ ಸಿಬ್ಬಂದಿಗೆ ಲಸಿಕೆ ಹಾಕುವಂತೆಯೂ ಅವರು ಸಲಹೆ ನೀಡಿದ್ದಾರೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತಮ್ಮ ಕೊಠಡಿಯಲ್ಲಿ ವಕೀಲರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ನಂತರವಷ್ಟೇ, ಆರು ಜನ ನ್ಯಾಯಾಧೀಶರಿಗೆ ಸೋಂಕು ತಗುಲಿರುವುದು ಬಹಿರಂಗಗೊಂಡಿತು.
‘ಎಲ್ಲ ವಕೀಲರಿಗೆ ಹಾಗೂ ಕೋರ್ಟ್ ಸಿಬ್ಬಂದಿಗೆ ಚುಚ್ಚುಮದ್ದು ಹಾಕಲು ಸಿಜೆಐ ಅವರು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದೂ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠದ ಸದಸ್ಯರಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮುಖಗವಸು ಧರಿಸಿಯೇ ಕುಳಿತಿದ್ದರು.