ನವದೆಹಲಿ: ‘ಜೀವ ಬೆದರಿಕೆ ಹಿನ್ನೆಲೆಯಲ್ಲಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಸಂಯೋಜಕ ಮತ್ತು ಐಎಎಸ್ ಅಧಿಕಾರಿ ಪ್ರತೀಕ್ ಹಜೆಲಾ ಅವರನ್ನು ತಕ್ಷಣ ಮಧ್ಯಪ್ರದೇಶಕ್ಕೆ ವರ್ಗಾಯಿಸಬೇಕು’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
1995ನೇ ಸಾಲಿನ ಅಸ್ಸಾಂ–ಮೇಘಾಲಯ ಕೇಡರ್ನ ಅಧಿಕಾರಿಯ ವರ್ಗಾವಣೆಗೆ ನಿಖರ ಕಾರಣವನ್ನು ಸುಪ್ರೀಂ ಕೋರ್ಟ್ ಕೂಡಾ ಬಹಿರಂಗಪಡಿಸಿಲ್ಲ. ಈ ಕುರಿತು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಕೇಳಿದಾಗ, ‘ಸಕಾರಣವಿಲ್ಲದೇ ಸೂಚಿಸುವುದಿಲ್ಲ’ ಎಂದಿದೆ.
‘ಯಾವುದೇ ಕಾರಣವಿಲ್ಲದೇ ನಿರ್ಧಾರ ಕೈಗೊಳ್ಳಲಾಗುವುದೇ?’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿದ್ದ ಪೀಠ ಈ ಕುರಿತು ಸೂಚನೆ ನೀಡಿತು. ತಕ್ಷಣ ಇಲ್ಲವೇ ಏಳು ದಿನದ ಒಳಗಾಗಿ ವರ್ಗಾವಣೆ ಮಾಡಿ ಎಂದು ಸೂಚಿಸಿತು.