ನವದೆಹಲಿ: ಲಾಕ್ಡೌನ್ ಅವಧಿಯಲ್ಲಿಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವೂ ಸೇರಿ ಐಪಿಸಿ ಸೆಕ್ಷನ್ ಅನ್ವಯ ದಾಖಲಾಗಿರುವ ವಿವಿಧ ಸಣ್ಣ ಪುಟ್ಟ ಪ್ರಕರಣ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು, ಅರ್ಜಿದಾರರ ಪರ ಹಾಜರಿದ್ದ ವಕೀಲರಿಗೆ ಸೆಕ್ಷನ್ 188 ಜಾರಿಗೊಳಿಸದೇ ಲಾಕ್ಡೌನ್ ಅನುಷ್ಠಾನ ಹೇಗೆ ಮಾಡುವುದು ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಮ್ ಸಿಂಗ್ ಅಧ್ಯಕ್ಷರಾಗಿರುವ ಸೆಂಟರ್ ಫಾರ್ ಅಕೌಂಟಬಿಲಿಟಿ ಅಂಡ್ ಸಿಸ್ಟಮ್ಯಾಟಿಕ್ ಚೇಂಜ್ ಸಂಸ್ಥೆಯು ಅರ್ಜಿ ಸಲ್ಲಿಸಿದ್ದು, ಇವರ ಪರ ವಕೀಲರಾದ ಗೋಪಾಲ್ ಶಂಕರನಾರಾಯಣ್, ವಕೀಲ ವಿರಾಗ್ ಗುಪ್ತಾ ಹಾಜರಿದ್ದರು.
ದೆಹಲಿಯ 50 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 23ರಿಂದ ಏಪ್ರಿಲ್ 13ರ ನಡುವೆ ಸೆಕ್ಷನ್ 188ರ ಅನ್ವಯಯ 848 ಎಫ್ಐಆರ್ ದಾಖಲಾಗಿವೆ ಎಂದು ಸಂಸ್ಥೆ ತಿಳಿಸಿತು.
ಸೆಕ್ಷನ್ 188ರಡಿ ದಾಖಲಾಗಿರುವ ಪ್ರಕರಣಗಳಲ್ಲಿ ₹ 200 ದಂಡ ಮತ್ತು ಒಂದು ತಿಂಗಳು ಸಜೆ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.ಜೀವಹಾನಿ, ಅನಾರೋಗ್ಯ ಕುರಿತಂತೆ ಸರ್ಕಾರಿ ಅಧಿಕಾರಿಗಳ ಸೂಚನೆಗಳ ನಿರ್ಲಕ್ಷಕ್ಕೆ ಸಂಬಂಧಿಸಿ 6 ತಿಂಗಳು ಸೆರೆವಾಸ ಅಥವಾ ರೂ 1,000 ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.