ನವದೆಹಲಿ: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್ಪಿ ನಾಯಕಿ ಮಾಯಾವತಿ ಮುಂತಾದ ನಾಯಕರ ವಿರುದ್ಧ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತೃಪ್ತಿ ವ್ಯಕ್ತಪಡಿಸಿದೆ.
ಜೊತೆಗೆ, ಚುನಾವಣಾ ಆಯೋಗವು ತಮಗೆ ‘ಪ್ರಚಾರ ನಿಷೇಧ ಶಿಕ್ಷೆ’ ನೀಡಿರುವುದನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ನಿರಾಕರಿಸಿದೆ. ಆಯೋಗದ ಆದೇಶದ ವಿರುದ್ಧ ಪ್ರತ್ಯೇಕ ದೂರು ದಾಖಲಿಸುವಂತೆ ಮಾಯಾವತಿ ಅವರ ವಕೀಲರಿಗೆ ಕೋರ್ಟ್ ಸೂಚಿಸಿದೆ.
ಪ್ರಚಾರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್ಪಿ ನಾಯಕಿ ಮಾಯಾವತಿ, ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಎಸ್ಪಿ ನಾಯಕ ಆಜಂ ಖಾನ್ ಅವರಿಗೆ ಚುನಾವಣಾ ಆಯೋಗವು ಹಲವು ಗಂಟೆಗಳ ಪ್ರಚಾರ ನಿಷೇಧ ಶಿಕ್ಷೆ ವಿಧಿಸಿತ್ತು.
ಆಯೋಗವು ನಾಲ್ವರು ನಾಯಕರಿಗೆ ಶಿಕ್ಷೆ ನೀಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಕೋರ್ಟ್, ‘ಚುನಾವಣಾ ಆಯೋಗಕ್ಕೆ ಮತ್ತೆ ಶಕ್ತಿ ಬಂದಿರುವಂತೆ ಕಾಣಿಸುತ್ತದೆ. ನೀವು ನಿದ್ದೆಯಿಂದ ಎದ್ದು ಕ್ರಮ ಕೈಗೊಳ್ಳಲು ಆರಂಭಿಸಿದ್ದೀರಿ. ಆದ್ದರಿಂದ ಬೇರೆ ಯಾವುದೇ ಆದೇಶ ನೀಡುವ ಅಗತ್ಯ ಕಾಣಿಸುತ್ತಿಲ್ಲ’ ಎಂದಿದೆ.