ನವದೆಹಲಿ: ಕೋವಿಡ್–19 ಪಿಡುಗಿನ ಕಾರಣ ಈ ವರ್ಷ ಒಡಿಶಾದ ಪುರಿಯ ಪ್ರಸಿದ್ಧ ಜಗನ್ನಾಥ ರಥೋತ್ಸವಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ಇದೇ 23ರಿಂದ ರಥೋತ್ಸವ ಆರಂಭವಾಗಬೇಕಿತ್ತು.
ಈ ಸಂದರ್ಭದಲ್ಲಿ ಸುಮಾರು 10–12 ದಿನಗಳವರೆಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಶ್ವದಾದ್ಯಂತ ಇರುವ ಭಕ್ತರು ಪಾಲ್ಗೊಳ್ಳುತ್ತಾರೆ.
ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ, ಎ.ಎಸ್.ಬೋಪಣ್ಣ ಅವರಿರುವ ನ್ಯಾಯಪೀಠ, ‘ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ವರ್ಷದ ರಥಯಾತ್ರೆಗೆ ಅನುಮತಿ ನೀಡುವುದು ಸಾಧ್ಯವಿಲ್ಲ’ ಎಂದು ಹೇಳಿತು.
‘ಕೋವಿಡ್ ವ್ಯಾಪಿಸಿರುವ ಇಂತಹ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಅವಕಾಶ ನೀಡಿದರೆ ಜಗನ್ನಾಥ ದೇವರು ಸಹ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಬೊಬಡೆ ಹೇಳಿದರು.
‘ರಾಜ್ಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಜಾತ್ರೆಗಳಿಗೆ ಅನುಮತಿ ನೀಡಬಾರದು’ ಎಂದು ನ್ಯಾಯಪೀಠ ಒಡಿಶಾ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಿತು.
ಈ ವರ್ಷದ ರಥಯಾತ್ರೆಯನ್ನು ರದ್ದುಪಡಿಸಬೇಕು ಇಲ್ಲವೇ ಮುಂದೂಡುವಂತೆ ನಿರ್ದೇಶನ ನೀಡುವಂತೆ ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು.