ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ನಂತರ ಪರಿಸ್ಥಿತಿ ಅವಲೋಕಿಸಲು ವಿದೇಶಿ ರಾಜತಾಂತ್ರಿಕರ ಎರಡನೆ ತಂಡ ಬುಧವಾರ ಭೇಟಿ ನೀಡಲಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ಎರಡನೆ ತಂಡವಾಗಿದ್ದು, 370ನೇ ವಿಧಿ ರದ್ದಾದ ನಂತರ ವಾಸ್ತವ ಸ್ಥಿತಿಯನ್ನು ತಂಡಅಧ್ಯಯನ ಮಾಡಲಿದೆ. ಈ ತಂಡದಲ್ಲಿ ಜರ್ಮನಿ, ಕೆನಡಾ, ಫ್ರಾನ್ಸ್, ಆಫ್ಘನಿಸ್ಥಾನದ ರಾಜತಾಂತ್ರಿಕರು ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶ್ರೀನಗರಕ್ಕೆ ಭೇಟಿ ನೀಡುವ ಮುನ್ನ ಉತ್ತರ ಕಾಶ್ಮೀರದಲ್ಲಿರುವ ಹಣ್ಣು ಬೆಳೆಗಾರರನ್ನು ಭೇಟಿ ಮಾಡಲಿರುವ ತಂಡ ಮಾಧ್ಯಮದವರನ್ನು ಭೇಟಿ ಮಾಡಲಿದ್ದು,ಅಲ್ಲಿನ ನಾಗರಿಕರನ್ನು ಭೇಟಿ ಮಾಡಲಿದ್ದಾರೆ.
ಭಾರತೀಯ ಸೇನೆಯು ಜಮ್ಮು-ಕಾಶ್ಮೀರದಲ್ಲಿರುವ ಭದ್ರತೆಯ ಕುರಿತು ವಿದೇಶಿಯರ ತಂಡಕ್ಕೆ ವಿವರಣೆ ನೀಡಲಿದ್ದಾರೆ. ಅಲ್ಲದೆ, ಸಂವಿಧಾನದ 370ನೆ ವಿಧಿ ರದ್ದಾದ ನಂತರ ಪಾಕಿಸ್ತಾನವು ಭಯೋತ್ಪಾದಕರಿಗೆ ಪರೋಕ್ಷವಾಗಿ ನೀಡುತ್ತಿರುವ ಬೆಂಬಲ ಹಾಗೂ ನೆರವು ನೀಡುತ್ತಿರುವ ವಿಧಾನಗಳನ್ನು ವಿವರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ರಾಜತಾಂತ್ರಿಕ ತಂಡವು ಬುಧವಾರ ಶ್ರೀನಗರದಲ್ಲಿ ತಂಗಲಿದ್ದು, ಗುರುವಾರ ಲೆಫ್ಟಿನೆಂಟ್ ಗೌವರ್ನರ್ ಜಿ.ಸಿ.ಮುರ್ಮು ಹಾಗೂ ಸ್ಥಳೀಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ.ಕಳೆದ ತಿಂಗಳು 15 ರಾಷ್ಟ್ರಗಳ ರಾಜತಾಂತ್ರಿಕರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿವೆ. ಈ ಸಂಬಂಧ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ತಂಡದ ರಾಜತಾಂತ್ರಿಕರು ಈ ಪ್ರದೇಶದಪರಿಸ್ಥಿತಿಯ ಕುರಿತು ತೃಪ್ತಿ ವ್ಯಕ್ತಪಡಿಸಿದ್ದು, ಸದ್ಯದಲ್ಲಿಯೇ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.