ನವದೆಹಲಿ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಖಾಲಿ ಬಂಗಲೆಗಳು, ಭೂಮಿ ಹಾಗೂ ವಸತಿ ಸಂಕೀರ್ಣಗಳನ್ನು ಒತ್ತುವರಿಯಿಂದ ರಕ್ಷಿಸುವ ಸಲುವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಖಾಸಗಿ ಭದ್ರತಾ ಸಂಸ್ಥೆಯ ನೆರವು ಪಡೆಯಲಿದೆ.
‘ಖಾಸಗಿ ಭದ್ರತಾ ಸಂಸ್ಥೆಯ ಸಿಬ್ಬಂದಿಯನ್ನು ಕಾವಲಿಗೆ ನೇಮಿಸುವ ಹೊಣೆಯನ್ನು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಹೊತ್ತಿದೆ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
‘ಒಂದು ವರ್ಷ ಅವಧಿಗೆ ಖಾಸಗಿ ಭದ್ರತಾ ಸಂಸ್ಥೆಯ ಸೇವೆ ಪಡೆಯಲಾಗುತ್ತದೆ. ಸಿಬ್ಬಂದಿಯನ್ನು ಸೇವೆಗೆ ನಿಯೋಜಿಸುವ ಮೊದಲು ದೆಹಲಿ ಪೊಲೀಸರು ಅವರ ಪೂರ್ವಾಪರ ಪರಿಶೀಲಿಸುತ್ತಾರೆ. ಖಾಲಿ ಇರುವ ಪ್ರತಿ ಬಂಗಲೆ, ಭೂಮಿಯ ಬಳಿ 24X7 ಅವಧಿಗೆ ತಲಾ ಇಬ್ಬರು ಭದ್ರತಾ ಸಿಬ್ಬಂದಿ ಕಾವಲು ಇರುತ್ತಾರೆ’ ಎಂದು ಮೂಲಗಳು ಹೇಳಿವೆ.