ಮುಂಬೈ: ಅಂತಿಮ ವರ್ಷದ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಇನ್ನೂ ವಿಳಂಬ ಮಾಡದೆ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್.ಕೋಶಿಯಾರಿ ಅವರ ನಿರ್ಧಾರವನ್ನು ಶಿವಸೇನಾ ಟೀಕಿಸಿದೆ.
‘ಕೋವಿಡ್–19 ವ್ಯಾಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಅಪಾಯಕ್ಕೆ ದೂಡಲು ಸಾಧ್ಯವಿಲ್ಲ’ ಎಂದಿದೆ.
ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಈ ಕುರಿತು ಸಂಪಾದಕೀಯ ಪ್ರಕಟವಾಗಿದ್ದು, ‘ಗುಜರಾತ್ ಮತ್ತು ಗೋವಾದಲ್ಲಿ ಆರ್ಎಸ್ಎಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪರೀಕ್ಷೆ ನಡೆಸುವುದಕ್ಕೆ ವಿರೋಧಿಸುತ್ತಿದೆ.
ಕೋಶಿಯಾರಿ ಅವರ ಬೇಡಿಕೆ ಇದಕ್ಕೆ ವಿರುದ್ಧವಾಗಿರುವುದು ಏಕೆ? ಮಹಾರಾಷ್ಟ್ರದಲ್ಲಿ ಆರ್ಎಸ್ಎಸ್ ಬೆಂಬಲಿತ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇಲ್ಲ ಎನ್ನುವುದು ಇದಕ್ಕೆ ಕಾರಣವೇ’ ಎಂದು ಪ್ರಶ್ನಿಸಲಾಗಿದೆ.