ನವದೆಹಲಿ: ಯಾವುದೇ ಸಂಸ್ಥೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ವ್ಯವಸ್ಥೆ ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ರಾಷ್ಟ್ರೀಯ ಮಹಿಳಾ ಆಯೋಗಕ್ಕೆ(ಎನ್ಸಿಡಬ್ಲ್ಯು) ಸೂಚನೆ ನೀಡಿದೆ. ದೇಶದಾದ್ಯಂತ ಲೈಂಗಿಕ ಕಿರುಕುಳ ಪ್ರಕರಣಗಳ ವಿರುದ್ಧ ‘ಮೀ– ಟೂ’ ಅಭಿಯಾನ ತೀವ್ರ ಸ್ವರೂಪ ಪಡೆಯುತ್ತಿರುವ ಕಾರಣ ಸಿಐಸಿ ಈ ಸೂಚನೆ ನೀಡಿದೆ.
ಮಹಿಳೆಯೊಬ್ಬರು ಎನ್ಸಿಡಬ್ಲ್ಯುಗೆ ದೂರು ನೀಡಿದರೆ, ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರು ಅಥವಾ ಆಂತರಿಕ ದೂರು ಸಮಿತಿ ದೂರು ನೀಡಿದವರನ್ನು ‘ಅನ್ಯಾಯದ ವಿರುದ್ಧ ಹೋರಾಡಿದವರ ರೀತಿ’ ಪರಿಗಣಿಸಬೇಕು ಮತ್ತು ರಕ್ಷಣೆ ನೀಡಬೇಕು ಎಂದು ಸಿಐಸಿ ಆಯುಕ್ತ ಶ್ರೀಧರ ಆಚಾರ್ಯುಲು ಹೇಳಿದ್ದಾರೆ.
ದಾಮೋದರ್ ವ್ಯಾಲಿ ಕಾರ್ಪೊರೇಷನ್ನಲ್ಲಿ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯದ ದೂರಿನ ತನಿಖೆಯ ಮಾಹಿತಿಯನ್ನು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೇಳಿದ್ದರು. ಆದರೆ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ದಾಖಲಾದ ದೂರಿನ ವಿಚಾರಣೆ ನಡೆಸಿದ ಸಿಐಸಿ, ಮಹಿಳಾ ಆಯೋಗಕ್ಕೆ ಮೇಲಿನಂತೆ ಸಲಹೆ ನೀಡಿದೆ.